Friday, January 4, 2013

ಸಿಟ್ಟು, ಕೋಪ, ಆಕ್ರಮಣಶೀಲತೆ

ನಾವು ಹೆತ್ತ ಮಗ ಸರ್. ಹೊಟ್ಟೆ, ಬಟ್ಟೆ ಕಟ್ಟಿ ಪ್ರೀತಿಯಿಂದ ಸಾಕಿದ್ದಕ್ಕೆ ನಮಗೆ ಕೊಟ್ಟ ಉಡುಗೊರೆ, ನನ್ನ ಕೈ ಮೂಳೆ ಮುರಿದಿದೆ. ಇವರ ಹುಬ್ಬಿನ ಮೇಲೆ ನಾಲ್ಕು ಇಂಚಿನ ಗಾಯ, ಏಟು ಅರ್ಧ ಅಂಗುಲ ಕೆಳಗೆ ಬಿದ್ದಿದ್ದರೆ, ಇವರ ಕಣ್ಣೇ ಹೋಗುತ್ತಿತ್ತು. ಬೈಕ್ ಬೇಕು ಎಂದು ಹಠ ಮಾಡಿದ. ಸಾಲ ಮಾಡಿ ತೆಗೆದುಕೊಟ್ಟೆವು. ಮೊಬೈಲ್ ಬೇಕು ಎಂದ. ಸ್ನೇಹಿತರನ್ನು ಬೇಡಿ, ತಂದು ಕೊಟ್ಟೆವು. ಕಂಪ್ಯೂಟರ್ ಕೋರ್ಸ್‌ಗೆ ಸೇರುತ್ತೇನೆಂದ. ಬ್ಯಾಂಕ್‌ಲೋನ್ ತೆಗೆದು ಸೇರಿಸಿದೆವು. ಒಂದು ತಿಂಗಳು ಹೋಗಿ, ಟೀಚರ್ಸ್ ಸರಿ ಇಲ್ಲ. ಚೆನ್ನಾಗಿ ಹೇಳಿಕೊಡೋಲ್ಲ ಎಂದುಬಿಟ್ಟ. ಹಣ ಹೋಯಿತು, ಅವನು ಕೇಳಿದ್ದೆಲ್ಲ, ನಾವು ಪೂರೈಸಲೇಬೇಕು. ಇಲ್ಲದಿದ್ದರೆ ಚೀರಾಟ, ಕೂಗಾಟ, ಕೆಟ್ಟ ಮಾತಿನ ಬೈಗುಳ. ನಿಮ್ಮ ತೀಟೆ ತೀರಿಸಿಕೊಂಡು ನನ್ನನ್ನು ಏಕೆ ಹುಟ್ಟಿಸಿದಿರಿ, ಮಗನಿಗೆ ಒಳ್ಳೆಯ ಜೀವನ ಕೊಡಲಾಗದ ನೀವು ಏಕೆ ಬದುಕಿರಬೇಕು ಎಂದು ಮೆಟ್ಟಿಲ ಮೇಲಿಂದ ನಮ್ಮಿಬ್ಬರನ್ನು ದೂಡಿದ. ಆಯತಪ್ಪಿ ಬಿದ್ದ ನನಗೆ ನನ್ನ ಗಂಡನಿಗೆ ಪೆಟ್ಟಾಯಿತು. ಇವರ ಹಣೆಯಿಂದ ರಕ್ತ ಹರಿಯುತ್ತಿದ್ದರೂ, ನೋಡದೆ ಹೊರಹೋದ. ನಾನು ಬಾಯಿ ಬಡಿದುಕೊಂಡೆ, ಅಕ್ಕಪಕ್ಕದವರು ಬಂದು ನಮ್ಮನ್ನು ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಕೊಡಿಸಿದರು ಎಂದಾಗ ಸೌಮ್ಯಳ ಕಣ್ಣುಗಳು ಕಣ್ಣೀರಿನ ಮಡುವಾಗಿದ್ದವು.


ಅಸಾಧ್ಯ ಸಿಟ್ಟು ಸರ್ ಇವಳಿಗೆ. ಹಾಗಲ್ಲ ಹೀಗೆ ಎಂದು ಹೇಳುವಂತಿಲ್ಲ. ಸಿಟ್ಟಿನಿಂದ ಕೂಗಾಡಿ ಬಿಡುತ್ತಾಳೆ. ಕೈಗೆ ಸಿಕ್ಕಿದ ವಸ್ತುಗಳನ್ನು ನಮ್ಮ ಮೇಲೆ ಎಸೆಯುತ್ತಾಳೆ. ಇಲ್ಲವೇ ನೆಲಕ್ಕೆ ಗೋಡೆಗೆ ಅಪ್ಪಳಿಸಿ ಹಾಳು ಮಾಡುತ್ತಾಳೆ. ಮುನಿಸಿಕೊಂಡರೆ, ಇಡೀ ದಿವಸ ಉಪವಾಸ ಇರುತ್ತಾಳೆ. ಚಂಡಿಕತೆ ಕೇಳಿದ್ದೀರಲ್ಲ, ಮಾಡು ಎಂಬುದನ್ನು ಮಾಡುವುದಿಲ್ಲ, ಮಾಡಬೇಡ ಎಂಬುದನ್ನು ಮಾಡುತ್ತಾಳೆ. ಎಲ್ಲವೂ ಅವಳು ಹೇಳಿದಂತೆಯೇ ಆಗಬೇಕು. ಅದು ಊಟದ ವಿಚಾರವಾಗಬಹುದು, ಬಟ್ಟೆ, ಬರೆ ಅಲಂಕಾರವಾಗಬಹುದು. ಅವಳು ಮನೆಯನ್ನು ಯಾವಾಗ ಬಿಡುತ್ತಾಳೆ, ಯಾವಾಗ ವಾಪಸ್ ಬರುತ್ತಾಳೆ ಎಂದು ನಾವು ಕೇಳುವಂತಿಲ್ಲ. ನನ್ನ ಮೇಲೆ ನಿಮಗೆ ನಂಬಿಕೆ ಇಲ್ಲ, ನಾನು ಮನೆ ಬಿಟ್ಟು ಹೋಗಿಬಿಡುತ್ತೇನೆ ಎಂದು ಕೂಗಾಡುತ್ತಾಳೆ ಏನು ಮಾಡಬೇಕೆಂದು ತೋಚುತ್ತಿಲ್ಲ ಎಂದರು ರಾಜಮ್ಮ.

ಸಿಟ್ಟು ಆಕ್ರಮಣಶೀಲತೆ ಯಾವುದೇ ಜೀವಿಗೆ ನೈಸರ್ಗಿಕವಾಗಿ ಬರುವ ಭಾವನೆ. ಪ್ರಾಣಿಗಳ ಮಟ್ಟದಲ್ಲಿ ಇದು ಅತ್ಯವಶ್ಯಕ. ಅವು ಬದುಕುಳಿಯಲು ಇವು ಬೇಕೇಬೇಕು. ಆಹಾರ ಸಂಪಾದಿಸಲು, ಆಕ್ರಮಣ ಮಾಡಬೇಕು. ತನ್ನ ಜಾಗಕ್ಕೆ ಇನ್ನೊಂದು ಪ್ರಾಣಿ ಅತಿಕ್ರಮಣ ಮಾಡಿದರೆ ಸಿಟ್ಟು ಮಾಡಿ, ಆಕ್ರಮಣ ನಡೆಸಬೇಕು, ಸಂತಾನೋತ್ಪತ್ತಿ ಮಾಡಲು, ಸಂಗಾತಿಯನ್ನು ಆಯ್ಕೆ ಮಾಡಲು, ಪಡೆಯಲು ಇತರರೊಡನೆ ಹೋರಾಟ ಮಾಡಬೇಕು.
ಆದರೆ ಮನುಷ್ಯನಲ್ಲಿ ಸಿಟ್ಟು, ಆಕ್ರಮಣಶೀಲತೆ, ಇಷ್ಟೊಂದು ಪ್ರಮಾಣದಲ್ಲಿ ಬೇಕಿಲ್ಲ.
ನಿತ್ಯ ಜೀವನದಲ್ಲಿ ಸಹಕಾರ, ಸ್ನೇಹಪರತೆ, ಸಹನೆ, ಶಾಂತತೆಗೇ ಹೆಚ್ಚು ಮಹತ್ವ ನೀಡಬೇಕಾಗುತ್ತದೆ. ಬೇಕು ಬೇಡಗಳು ಪೂರೈಕೆಯಾಗದೇ ನಿರಾಶೆಯಾದಾಗ ಸಿಟ್ಟು ಬರುತ್ತದೆ. ಪ್ರೀತಿ, ವಿಶ್ವಾಸ ತೋರಿಸಬೇಕಾದವರು, ಪ್ರೀತಿ ತೋರಿಸದೆ, ತಿರಸ್ಕಾರ-ಉದಾಸೀನ ಮಾಡಿದಾಗ ಸಿಟ್ಟು ಬರುತ್ತದೆ. ತನ್ನ ಹಕ್ಕುಗಳನ್ನು ಇತರರು ಉಲ್ಲಂಘಿಸಿದಾಗ ವ್ಯಕ್ತಿ ಕೋಪಿಸಿಕೊಳ್ಳುತ್ತಾನೆ. ಅನ್ಯಾಯ, ಅಕ್ರಮಗಳಾದಾಗ ಸಿಟ್ಟು ಮಾಡಿ ಅನ್ಯಾಯ-ಅಕ್ರಮಗಳನ್ನು ಮಾಡಿದವರ ಮೇಲೆ ಅಕ್ರಮಣ ಮಾಡುತ್ತಾನೆ. ಹೀಗಾಗಿ ಸಿಟ್ಟು, ಕೋಪ, ಅಕ್ರಮಣಶೀಲತೆ, ಸಹಜ ಸ್ವಾಭಾವಿಕ ಭಾವನೆ, ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಮನುಷ್ಯನಿಗಿರಬೇಕು. ಆದರೆ ಅದರ ಪ್ರಮಾಣ ಮತ್ತು ಪ್ರಕಟಣೆಯಲ್ಲಿ ಪ್ರತಿಯೊಬ್ಬರೂ ವಿವೇಚನೆಯನ್ನು ತೋರಬೇಕು. ಇಲ್ಲದಿದ್ದರೆ, ಹಿಂಸೆಯಾಗುತ್ತದೆ. ಅನಾಹುತಗಳಾಗುತ್ತವೆ. ಲಗಾಮಿಲ್ಲದ ಕೋಪ, ಆಕ್ರಮಣಶೀಲತೆ, ಬೆಂಕಿಯಂತೆ ವ್ಯಕ್ತಿಯನ್ನು ಸೇರಿದಂತೆ ಎಲ್ಲರನ್ನೂ ಸುಡುತ್ತದೆ. ನೋವನ್ನುಂಟುಮಾಡುತ್ತದೆ.
ಕೋಪ-ಆಕ್ರಮಣಕಾರಿ ಭಾವನೆಗಳು ಬರುತ್ತಿದ್ದಂತೆ, ದೇಹದಲ್ಲಿ ಹೆಚ್ಚು "ಅಡ್ರಿನಲಿನ್ ಮತ್ತು ಕಾರ್ಟಿಸಾಲ್" ಹಾರ್ಮೋನುಗಳು ಉತ್ಪತ್ತಿಯಾಗಿ ವ್ಯಕ್ತಿಯನ್ನು ಹೋರಾಟಕ್ಕೆ ಸಜ್ಜು ಮಾಡುತ್ತವೆ. ಮಿದುಳಿಗೆ ರಕ್ತ ಪೂರೈಕೆ ಕಡಿಮೆಯಾಗಿ, ವ್ಯಕ್ತಿಯ ವಿವೇಚನೆ, ಬೌದ್ಧಿಕ ಸಾಮರ್ಥ್ಯಗಳನ್ನು ತಗ್ಗಿಸುತ್ತದೆ. ವ್ಯಕ್ತಿ ವಿವೇಚನಾ ರಹಿತನಾಗಿ, ಸರಿತಪ್ಪುಗಳ ತುಲನೆ ಮಾಡದೇ ಪರಿಣಾಮಗಳನ್ನು ಲೆಕ್ಕಿಸದೆ, ಕೋಪವನ್ನು ಪ್ರದರ್ಶಿಸಲು ಸಜ್ಜಾಗುತ್ತಾನೆ. ಅನೇಕ ಹೀನ ಅಪರಾಧಗಳನ್ನು ಮಾಡಲೂ ಹೇಸುವುದಿಲ್ಲ.
ಸಾಮಾನ್ಯವಾಗಿ ಹದಿಹರೆಯದವರಿಗೆ,ಯುವ ಜನರಿಗೆ ಸಿಟ್ಟು, ಕೋಪ ಹೆಚ್ಚು. ಆಕ್ರಮಣಶೀಲತೆಯೂ ಹೆಚ್ಚು. ಆದ್ದರಿಂದಲೇ ಅವರನ್ನು "ಬಿಸಿರಕ್ತದವರು ಎಂದು ಜನ ಹೇಳುತ್ತಾರೆ". ಅನ್ಯಾಯ, ಅಕ್ರಮ, ಮೋಸ, ವಂಚನೆಗಳನ್ನು ಕಂಡರೆ, ಯುವ ಜನರಲ್ಲದೆ, ಇನ್ಯಾವ ವಯಸ್ಸಿನವರು ಸಿಡಿದೇಳಲು ಸಾಧ್ಯ?
ವಯಸ್ಸಾಗುತ್ತಿದ್ದಂತೆ ಆಕ್ರಮಣ ಶೀಲತೆ ಕುಗ್ಗುತ್ತದೆ. ಅಡ್ರಿನಲಿನ್, ಕಾರ್ಟಿಸಾಲ್ ಉತ್ಪತ್ತಿ ಕಡಿಮೆಯಾಗುತ್ತದೆ. ಹೃದಯ ಶ್ವಾಸಕೋಶಗಳ, ಸ್ನಾಯುಗಳ ಬಲವೂ ಕುಂಠಿತಗೊಳ್ಳುತ್ತದೆ.ಆದರೆ ಇತ್ತೀಚೆಗೆ, ಹರೆಯದವರಲ್ಲಿ ಸಿಟ್ಟು, ಕೋಪ ಆಕ್ರಮಣಶೀಲತೆ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಈ ಸಿಟ್ಟು ಕೋಪಗಳ ದುಷ್ಪರಿಣಾಮಗಳಿಗೆ, ಹೆತ್ತವರು, ಒಡಹುಟ್ಟಿದವರು, ಮನೆಯವರು, ಸಹಪಾಠಿಗಳು, ಅಧ್ಯಾಪಕರು ಮತ್ತು ಇತರರು ಒಳಗಾಗುತ್ತಾರೆ. ಇದಕ್ಕೆ ಕಾರಣಗಳು ಹಲವಾರು:
ಹದಿಹರೆಯದವರ ಬೇಕು-ಬೇಡಗಳು, ನಿರೀಕ್ಷೆಗಳು ಹೆಚ್ಚುತ್ತಿವೆ:
ಆಹಾರ, ವಸ್ತ್ರ, ವಸತಿ, ಭೋಗವಸ್ತುಗಳು, ಹಣ, ಮನರಂಜನಾ ಚಟುವಟಿಕೆಗಳು, ಸ್ವಾತಂತ್ರ್ಯ, ಸ್ಥಾನಮಾನ, ಕೀರ್ತಿಗಳು ಎಷ್ಟಿದ್ದರೂ ಅವರಿಗೆ ಸಾಲದಾಗುತ್ತಿವೆ. "ಕೊಳ್ಳಬಾಕ ಸಂಸ್ಕೃತಿಯಲ್ಲಿ ಎಲ್ಲ ಉತ್ಪಾದಕರು ಹರೆಯದವರನ್ನು ಗಮನದಲ್ಲಿಟ್ಟುಕೊಂಡು, ವಸ್ತು ವಿಶೇಷಗಳನ್ನು ತಯಾರಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ". ಒಬ್ಬರು ಕೊಂಡರೆ ಸಾಕು ಉಳಿದವರೆಲ್ಲರಿಗೂ ಅದು ಬೇಕು. ಅಗತ್ಯವಿಲ್ಲದಿದ್ದರೂ ಪ್ರತಿಷ್ಠೆಗಾಗಿ, ಸ್ಪರ್ಧೆಗಾಗಿ ಕೊಂಡುಕೊಳ್ಳುವ ಆತುರವನ್ನು ಎಲ್ಲರಲ್ಲೂ ಮೂಡಿಸುತ್ತಾರೆ. ಸಿಗದಿದ್ದಾಗ, ಕೊಂಡುಕೊಳ್ಳಲು ಆಗದಿದ್ದಾಗ, ತಂದೆ-ತಾಯಿಗಳು ಬೇಡವೆಂದಾಗ, ನಿರಾಶೆಗೊಳಗಾಗಿ ಸಿಟ್ಟಿಗೇಳುತ್ತಾರೆ.
ಮುಖ್ಯವಾಗಿ ಹರೆಯದವರಿಗೆ ಪರಿಪೂರ್ಣ ಸ್ವಾತಂತ್ರ-ಸ್ವಾಯತ್ತತೆ ಬೇಕೆನಿಸುತ್ತದೆ. ತಮ್ಮಿಷ್ಟ ಬಂದಂತೆ ನಡೆದುಕೊಳ್ಳಲು, ಜೀವಿಸಲು, ಎಲ್ಲ ಚಿಕ್ಕ-ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಲು ಅವರು ಇಚ್ಚಿಸುತ್ತಾರೆ. ಅವರಿಗೆ ಯಾರ ಸಲಹೆ, ಬುದ್ಧಿವಾದ, ಮಾರ್ಗದರ್ಶನ ಪಡೆಯಲು ಇಷ್ಟವಾಗುವುದಿಲ್ಲ. ತಮ್ಮ-ತಮ್ಮಲ್ಲೇ ಮಾತಾಡಿಕೊಂಡು, ನಿರ್ಧಾರ ಮಾಡುತ್ತಾರೆಯೇ ಹೊರತು ಹಿರಿಯರ, ಅಧ್ಯಾಪಕರ ಮಾತುಗಳನ್ನು ಕೇಳಲು ಅಥವಾ ಅವರೊಂದಿಗೆ ಚರ್ಚಿಸಲು ತಯಾರಿರುವುದಿಲ್ಲ. ಹಿರಿಯರ ಹಳೆಯ ಕಾಲದ ರೀತಿನೀತಿಗಳು, ಧೋರಣೆಗಳು, ಜೀವನ ಶೈಲಿ ಅವರಿಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ಇದರಿಂದ ನಿರಾಶೆ ನಿತ್ಯದ ಸಂಗತಿಯಾಗುತ್ತದೆ.
ವಿಪರೀತ ಸ್ಪರ್ಧೆ, ದೊಡ್ಡ ಗುರಿ ನಿತ್ಯ ಯೋಗ್ಯತೆಯ ಪರೀಕ್ಷೆ:
ಇತ್ತೀಚಿನ ದಿನಗಳಲ್ಲಿ, ಸ್ಪರ್ಧೆ ಮುಗಿಲನ್ನು ಮುಟ್ಟಿದೆ. ಕೆಲವೇ ಅವಕಾಶಗಳು; ಸಾವಿರಾರು ಮಂದಿಗೆ ಅವುಗಳ ಮೇಲೆ ಕಣ್ಣು. ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಅಥವಾ ತಂದೆ ತಾಯಿಯ ಬಳಿ ಎಷ್ಟು ದೊಡ್ಡದಾದ ಹಣದ ಥೈಲಿ ಇದೆ ಎಂಬುದರ ಮೇಲೆ ಗುರಿಮುಟ್ಟಬಹುದೇ ಇಲ್ಲವೇ ಎಂಬುದು ನಿರ್ಧಾರವಾಗುತ್ತದೆ. ಹೀಗಾಗಿ ಹೆಚ್ಚೆಚ್ಚು ಅಂಕಗಳನ್ನು ಗಳಿಸಲು ತಂದೆತಾಯಿಗಳು, ಶಿಕ್ಷಕರು ಮಕ್ಕಳ ಮೇಲೆ ಅಸಾಧ್ಯ ಒತ್ತಡ ಹೇರುತ್ತಾರೆ. ೯೦% ಅಂಕಗಳನ್ನು ತೆಗೆಯಲು ಬಹುಮಾನಗಳ ಆಮಿಷವನ್ನು ಒಡ್ಡುತ್ತಾರೆ. ಶೇಕಡಾ ೨೦ರಿಂದ೨೫ರಷ್ಟು ವಿದ್ಯಾರ್ಥಿಗಳು ಯಶಸ್ವಿಯಾದರೆ ಉಳಿದವರು ವಿಫಲರಾಗುತ್ತಾರೆ. ನಿರಾಶೆ ಅವರಿಗೆ ಕಟ್ಟಿಟ್ಟ ಬುತ್ತಿಯಾಗುತ್ತದೆ. ಮನೆಯಲ್ಲಿ ಒಬ್ಬರು ೯೦% ತೆಗೆಯುವಲ್ಲಿ ಸಫಲರಾದರೆ, ಉಳಿದವರು ಇತರರ ತಿರಸ್ಕಾರ ಹೀನಾಯದಲ್ಲಿ ಬದುಕಬೇಕಾಗುತ್ತದೆ.
ಮಾಧ್ಯಮಗಳ ಪ್ರಭಾವ:
ವೈಭವದ ಶ್ರೀಮಂತ ಜೀವನ ಶೈಲಿಯನ್ನು ಬಿಂಬಿಸುವ ಸಿನೆಮಾ, ಟೀವಿ ಧಾರಾವಾಹಿಗಳು, ಜಾಹೀರಾತುಗಳು, ಹಣ-ಆಸ್ತಿ-ಕೀರ್ತಿ-ಸ್ಥಾನಮಾನಗಳನ್ನು ಅಡ್ಡದಾರಿಯಲ್ಲಿ. ಅಕ್ರಮವಾಗಿ ಸಂಪಾದಿಸುವ ಪಾತ್ರಗಳು ಅಥವಾ ವ್ಯಕ್ತಿಗಳ ವೈಭವೀಕರಣ, ಲೈಂಗಿಕತೆ ಮತ್ತು ಹಿಂಸೆ, ಆಕ್ರಮಣಶೀಲತೆಯನ್ನು ರೋಚಕವಾಗಿ ಚಿತ್ರಿಸುವ ವರದಿಗಳು, ಕಲ್ಪನೆಗಳು, ಸಮಾಜದಲ್ಲಿ ಉಳ್ಳವರು ಮತ್ತು ಇಲ್ಲದವರ ನಡುವಿನ ಕಂದಕವನ್ನು ಪ್ರಚೋದನಾತ್ಮಕ ರೀತಿಯಲ್ಲಿ ವಿವರಿಸುವುದು. ನೀತಿನಿಯಮಗಳನ್ನು ಭಂಗ ಮಾಡುವುದೇ ಸರಿ. ರಾಜಿಸಂಧಾನಕ್ಕಿಂತ ಬಲಪ್ರಯೋಗವೇ ಉತ್ತಮ ಇತ್ಯಾದಿ ಅಕ್ರಮಣಕಾರಿ ಧೋರಣೆಗಳನ್ನು ಪ್ರೇರೇಪಿಸುವ ಚಿತ್ರಣಗಳು ಹರೆಯದವರ ಮೇಲೆ ಸಾಕಷ್ಟು ದುಷ್ಪರಿಣಾಮಗಳನ್ನುಂಟುಮಾಡುತ್ತವೆ.
ಆನುವಂಶೀಯತೆಯಿಂದ , ಮಿದುಳಿಗಾಗುವ ಸಣ್ಣಪ್ರಮಾಣದ ಹಾನಿ:
ಗರ್ಭಧಾರಣೆ ಅವಧಿಯಲ್ಲಿ ಹೆರಿಗೆಯಾಗುವಾಗ ಮತ್ತು ಆನಂತರದ ಐದು ವರ್ಷಗಳಲ್ಲಿ ನಾನಾ ಕಾರಣಗಳಿಂದ ಮಿದುಳಿಗೆ ಅತಿ ಅಲ್ಪಮಟ್ಟದ ಹಾನಿಯುಂಟಾಗಬಹುದು. ಇದನ್ನು minimum brain damage ಎನ್ನುತ್ತಾರೆ. ಈ ಮಟ್ಟದ ಹಾನಿಗೀಡಾದ ಮಕ್ಕಳಲ್ಲಿ ಇತರ ಮಕ್ಕಳಿಗೆ ಹೋಲಿಸಿದರೆ, ಆಕ್ರಮಣಶೀಲನೆ, ಸಿಟ್ಟುಕೋಪ, ನೀತಿ ನಿಯಮಗಳನ್ನು ಭಂಗ ಮಾಡುವ ಪ್ರವೃತ್ತಿ ಅಪರಾಧ ಮಾಡುವ ಮನೋಭಾವ ಹೆಚ್ಚಾಗಿ ಕಂಡು ಬರುತ್ತದೆ ಎಂಬುದು ಗಮನಾರ್ಹ. ಸಿಟ್ಟು-ಆಕ್ರಮಣಶೀಲತೆ ಅನುವಂಶೀಯವಾಗಿಯೂ ಬರಬಹುದು.
ಮಧ್ಯಪಾನ ಮಾದಕವಸ್ತುಗಳ ಸೇವನೆ: 
ಮಧ್ಯಪಾನ ಮತ್ತು ಮಾದಕ ವಸ್ತುಗಳು ವ್ಯಕ್ತಿಯ ವಿವೇಚನೆಯನ್ನು ಹಾಳು ಮಾಡುತ್ತವೆ. ಹಾಗೆಯೇ ಅಮಲಿನಲ್ಲಿ ಅದುಮಿಟ್ಟ ನಕಾರಾತ್ಮಕ ಭಾವನೆಗಳು ಪ್ರಕಟಗೊಳ್ಳುತ್ತವೆ. ಜೊತೆಗೆ ಈಗಾಗಲೇ ಮಧ್ಯಪಾನ-ಮಾದಕ ವಸ್ತಗಳು ಸೇವನೆಯ ಚಟಕ್ಕೆ ವ್ಯಕ್ತಿ ತುತ್ತಾಗಿದ್ದರೆ. ನಿಗದಿತ ಪ್ರಮಾಣದ ಮದ್ಯಮಾದಕ ವಸ್ತುವನ್ನು ನಿರ್ದಿಷ್ಟ ವೇಳೆಗೆ ವ್ಯಕ್ತ ಸೇವಿಸದೇ ಹೋದರೆ ಹಿಂದೆಗೆತದ ಚಿನ್ಹೆಗಳು ಕಾಣಿಸಿಕೊಳ್ಳುತ್ತವೆ (withdrawal sysmtoms) ಅವು ದೈಹಿಕವಾಗಿ ಮಾನಸಿಕವಾಗಿ ವ್ಯಕ್ತಿಗೆ  ಹಿಂಸೆಯನ್ನುಂಟು ಮಾಡುತ್ತವೆ. ಆಗ ವ್ಯಕ್ತಿ ಸಿಟ್ಟು ಕೋಪ, ಅಕ್ರಮಣಶೀಲತೆಯನ್ನು ಪ್ರಕಟಿಸುತ್ತಾನೆ.
ಮಾನಸಿಕ ಕಾಯಿಲೆಗಳು
ಖಿನ್ನತೆ, ಮೇನಿಯ, ಸ್ಕಿಜೋಫ್ರೀನಿಯಾದಂತಹ ತೀವ್ರತರದಮಾನಸಿಕ ಕಾಯಿಲೆಗಳಲ್ಲಿ ಸಿಟ್ಟು ಕೋಪ, ಆಕ್ರಮಣ ಪ್ರವೃತ್ತಿ ರೋಗಲಕ್ಷಣಗಳಾಗಿ ಕಾಣಿಸಕೊಳ್ಳುತ್ತವೆ. ನಿರಾಶೆ, ಅಸಹಾಯಕತೆ, ಸಂಶಯ, ಭ್ರಮೆಗಳು ಆಕ್ರಮಣ ಶೀಲತೆಯನ್ನು ಹೆಚ್ಚಿಸುತ್ತವೆ.
ಸಿಟ್ಟು ಕೋಪ, ಆಕ್ರಮಣ ಶೀಲತೆಯನ್ನು ತಗ್ಗಿಸುವುದು ಹೇಗೆ?
ಸರಳ ಜೀವನ, ನಿತ್ಯತೃಪ್ತಿ: ಮಕ್ಕಳಿಗೆ ತಮ್ಮ ಬೇಕು ಬೇಡಗಳನ್ನು ತಗ್ಗಿಸಲು, ಸರಳ ಜೀವನವನ್ನು ನಡೆಸಲು ತಂದೆತಾಯಿಗಳು ಮೊದಲಿನಿಂದಲೇ ತರಬೇತಿಕೊಡಬೇಕು. ಹಾಗೆಯೇ ಈ ವಿಚಾರದಲ್ಲಿ ತಾವೇ ಮಾದರಿಯಾಗಿರಬೇಕು. ನಿತ್ಯ ಏನು ಲಭ್ಯವೋ, ಎಷ್ಟ ಲಭ್ಯವೋ ಅಷ್ಟರಲ್ಲಿ ತೃಪ್ತಿ ಸಂತೋಷ ಪಡಲು ಪ್ರೇರಣೆ ನೀಡಬೇಕು. ತನಗೆ ಸಿಕ್ಕದ್ದು, ಸಾಲದು, ಇತರರಿಗೆ ಹೆಚ್ಚು ಸಿಕ್ಕಿದೆ ಎಂಬ ಧೋರಣೆ ಭಾವನೆಯನ್ನು ಬಿಡಬೇಕು. ಪಾಲಿಗೆ ಬಂದದ್ದೇ ಪಂಚಾಮೃತ ಎಂದುಕೊಳ್ಳಬೇಕು.
ಅಗತ್ಯಗಳ ಪೂರೈಕೆಗೆ ಶಿಸ್ತು ವಿಧಿವಿಧಾನಗಳ ಬಳಕೆ ಮತ್ತು ಸಂಪನ್ಮೂಲಕ್ಕೆ ತಕ್ಕಂತೆ, ನಿಧಾನಗತಿಯಲ್ಲಿ ಅಗತ್ಯ ಪೂರೈಕೆ ಮಾಡಿಕೊಳ್ಳಲು ಕಲಿಸಬೇಕು.ಸಂಬಂಧಗಳಲ್ಲಿ ಪ್ರೀತಿ, ವಿಶ್ವಾಸಕ್ಕೆ ಹೆಚ್ಚು ಮಾನ್ಯತೆ, ಇರುವುದನ್ನು ಹಂಚಿಕೊಳ್ಳಲು ಪ್ರೋತ್ಸಾಹ ನೀಡಬೇಕು ಇತರರ ತಪ್ಪು ನ್ಯೂನತೆಗಳನ್ನು ಕೊರತೆಗಳನ್ನು ಒಪ್ಪಿಕೊಂಡು, ಹೊಂದಿಕೊಳ್ಳಲು ಒತ್ತಾಸೆ ನೀಡಬೇಕು.
ಸಿಟ್ಟು ಆಕ್ರಮಣಶೀಲತೆಯ ದುಷ್ಟರಿಣಾಮಗಳನ್ನು ಸಮಯ ಸಂದರ್ಭ ಸಿಕ್ಕಾಗಲೆಲ್ಲಾ ವಿವರಿಸಬೇಕು. ಸಹನೆ ಸಹಕಾರದ ಸತ್ಪರಿಣಾಮಗಳನ್ನು ತಿಳಿಸಿಕೊಳ್ಳಬೇಕು.
ಇತರರು ಅನ್ಯಾಯ ಮಾಡಿದಾಗ, ಅನುಚಿತವಾಗಿ ನಡೆದುಕೊಂಡಾಗ, ಅವರು ಏಕೆ ನಡೆದುಕೊಂಡರು, ಉದ್ದೇಶಪೂರ್ವಕವಾಗಿ ಮಾಡದೆ, ತಪ್ಪು ಗ್ರಹಿಕೆಯಿಂದ ಮಾಡಿದರೇ ಸನ್ನಿವೇಶ ಸಂದರ್ಭದ ಅಗತ್ಯತೆಗಳಿಂದ ಮಾಡಿದರೇ ಎಂದು ವಿವೇಚಿಸಬೇಕು. ತಮ್ಮ ವರ್ತನೆಗೆ ಕಾರಣ ತಿಳಿಸಲು ಅವರಿಗೊಂದು ಅವಕಾಶ ನೀಡಬೇಕು. ಅವರು ಪಶ್ಚಾತ್ತಾಪಪಟ್ಟರೆ ಅದನ್ನು ಮಾನ್ಯ ಮಾಡಬೇಕು. ಮನೆಯವರಾಗಲೀ, ಹೊರಗಿನವರಾಗಲೀ ಅವರನ್ನು ಅರ್ಥಮಾಡಿಕೊಂಡು, ಅವರಿಂದ ಏನನ್ನು, ಎಷ್ಟನ್ನು ನಿರೀಕ್ಷಿಸಬಹುದು. ಎಂಬುದನ್ನು ಅರಿತುಕೊಳ್ಳಬೇಕು ಟೀಕೆ ತಿರಸ್ಕಾರಗಳನ್ನು ಆದಷ್ಟು ನಿವಾರಿಸಿಕೊಂಡು, ಶ್ಲಾಘನೆ ಮೆಚ್ಚುಗೆಯನ್ನು ಧಾರಾಳವಾಗಿ ನೀಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು.
ಮೌನಾಚರಣೆ: ಸಿಟ್ಟು ಕೋಪ ಬಂದಾಗ ಅರ್ಧ ನಿಮಿಷ, ಅಲ್ಲೇ ಕುಳಿತು ಅಥವಾ ಆ ಜಾಗದಿಂದ ಹೊರಬಂದು, ಮೌನವಾಗಿರಬೇಕು. ತಕ್ಷಣದ ಪ್ರತಿಕ್ರಿಯೆಯನ್ನು ಪ್ರಕಟಿಸಬಾರದು. ಮೌನವಾಗಿರಲು ಸಾಧ್ಯವಿಲ್ಲವಾದರೆ, ಒಂದು ಲೋಟ ನೀರು ಕುಡಿಯುವುದು, ಒಂದು ಕಾಗದವನ್ನು ಹತ್ತು ಚೂರಾಗಿ ಹರಿಯುವುದೋ, ಕಣ್ಣುಮುಚ್ಚಿ ದೀರ್ಘವಾದ ಉಸಿರಾಟ ಮಾಡುವುದೋ ಮಾಡಬೇಕು. ವಾಕಿಂಗ್ ಇಲ್ಲವೇ ಬಯಲಿಗೆ ಹೋಗಿ ಯಾವುದಾದರೂ ವ್ಯಾಯಾಮ ಅಥವಾ ಆಟವಾಡಿದರೆ, ಮನಸ್ಸು ಸ್ಥಿಮಿತಕ್ಕೆ ಬರುತ್ತದೆ.
ಸಿಟ್ಟು, ಕೋಪ, ತಾಪಗಳ ಸೌಮ್ಯ ಪ್ರಕಟಣೆ: ನಮಗೆ ಮತ್ತು ಇತರರಿಗೆ ಹಿಂಸೆಯಾಗದ ರೀತಿಯಲ್ಲಿ ಸೌಮ್ಯವಾಗಿ ಆದರೆ ಅಷ್ಟೇ ಪರಿಣಾಮಕಾರಿಯಾಗಿ ನಮ್ಮ ಅಸಮಾಧಾನ ಪ್ರತಿಭಟನೆಯನ್ನು ಹೇಗೆ ಮಾಡಬೇಕೆಂದು ಯೋಚಿಸಿ ಕಾರ್ಯಪ್ರವೃತ್ತರಾಗಬೇಕು. ಗಾಂಧಿಕಲ್ಪಿಸಿದ ಹಿಂಸೆಗೆ ಹಿಂಸೆ ಮದ್ದಲ್ಲ, ಹಿಂಸೆಗೆ ಅಹಿಂಸೆಯೇ ಸರಿಯಾದ ಉತ್ತರ ನಮ್ಮ ದಾರಿದೀಪವಾಗಬೇಕು.

ಪುಸ್ತಕ: ಹರೆಯದವರ ಸಮಸ್ಯೆಗಳನ್ನು ನಿಭಾಯಿಸುವುದು ಹೇಗೆ?
ಲೇಖಕರು: ಸಿ. ಆರ್. ಚಂದ್ರಶೇಖರ್

ಪ್ರಕಾಶಕರು: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು