Friday, May 30, 2014

ಸೌಂದರ್ಯ ಎಂದರೇನು ?



ಬದುಕಿನಲ್ಲಿ ಸುಖಕ್ಕೆ ತನ್ನದೇಯಾದ ಸ್ಥಾನವಿದ್ದರೂ, ಸಂತೋಷಕ್ಕೆ ಅದು ಸಮವಲ್ಲ ಉದಾಹರಣೆಗೆ ಶ್ರೀಮಂತ ದೇಶಗಳಲ್ಲಿ ದಿನದ ಅಗತ್ಯಗಳಿಗೆ ಪರದಾಡಬೇಕಿಲ್ಲ. ಆದರೂ ಅವರು ಆನಂದವಾಗಿಲ್ಲ. ಹಾಗಾಗಿಯೇ ಅವರು ಸಂತೋಷವನ್ನು ವಿಲಾಸದಲ್ಲಿ ಹುಡುಕುತ್ತಾರೆ, ತಮ್ಮ ದೈನಂದಿನ ಅಗತ್ಯಗಳನ್ನು ಪೂರೈಸುತ್ತಲೇ ಒಂಟಿತನ, ಸುಖದ ಭ್ರಮೆಯ ವಿಷವರ್ತುಲಕ್ಕೆ ಸಿಕ್ಕಿಬೀಳುತ್ತಾರೆ. ನಮ್ಮ ಅಗತ್ಯಗಳನ್ನು ಪೂರೈಸಿಬಿಟ್ಟರೆ ನಮಗೆ ಸಂತೋಷ ದಕ್ಕುತ್ತದೆ ಎಂಬುದು ಭ್ರಮೆ. ಈ ಭ್ರಮೆಯೇ ನಮ್ಮ ಜೀವನವನ್ನು ಹೋರಾಟ, ಬಿಕ್ಕಟ್ಟುಗಳಿಂದ ತುಂಬಿಬಿಡುತ್ತದೆ. ನಿಜವಾದ ಆತ್ಮಾನಂದ ಆನಂದ ದೊರೆತಾಗ ಈ ಸಂಘರ್ಷ ಕೊನೆಗೊಳ್ಳುತ್ತದೆ. ಹಾಗಾದರೆ ಈ ಆತ್ಮಾನಂದ ಆನಂದ ದೊರೆಯುವುದು ಹೇಗೆ? ವ್ಯಕ್ತಿಯು ಮಾನಸಿಕ ವಿಕಸನ ಹೊಂದಿ ನಿಮ್ಮಲ್ಲಿ ಪ್ರೀತಿ ತುಂಬಿದಾಗ. ಹಾಗಾದರೆ ಪ್ರೀತಿ ಅಂದರೆ ಏನು? ಸೂಕ್ಷ್ಮಜ್ಞತೆಯೇ ಪ್ರೀತಿ, ಆಂತರಿಕ ಸೌಂದರ್ಯ ಬೆಳೆದಂತೆ ಸೂಕ್ಷ್ಮಜ್ಞತೆ ಬೆಳೆಯುತ್ತದೆ ಅಂತಹ ಸೂಕ್ಷ್ಮಜ್ಞತೆ ದಕ್ಕಿಸಿಕೊಂಡಾಗ/ಇದ್ದಾಗಲೇ ಜೀವನದ ಅನುಭವ ದಕ್ಕುವುದು.

ಬೇಸಿಗೆ ರಜೆ ಕಳೆಯಲು ಕಳೆದವಾರ ಮಕ್ಕಳ ಸಮೇತ ನನ್ನ ಶ್ರೀಮತಿಯ ತವರಿನಲ್ಲಿ ಬಿಡಾರ, ಹಾಗೆ ಕಾಲ ಕಳೆಯಲು ತೋಟದ ಕಡೆ ಹೋದಾಗ ಹಸಿರು ಹೊಲದಲ್ಲಿ ಗಾಳಿಗೆ ತೂಗುವ ಹಳದಿ ಸೇವಂತಿ ಹೂಗಳು, ಹರಿವತೊರೆ ಎಂತಹ ಸುಂದರ ದೃಶ್ಯ ಎಂದು ಅನ್ನಿಸಿತು. ಸದ್ದುಗದ್ದಲಗಳಿಂದ ದೂರವಾದ ಗ್ರಾಮೀಣ ಬದುಕನ್ನು ತನ್ಮಯತೆಯಿಂದ ಅನುಭವಿಸುತ್ತಿದ್ದೆ. ಇಂತಹ ಸಂದರ್ಭಗಳಲ್ಲೇ ಸೌಂದರ್ಯ ಎಂದರೇನು ಎಂದು ಪ್ರಶ್ನೆ ತಾನೇತಾನಾಗಿ ಮೊಳೆಯಿತು. ಚೆಲುವನ್ನು ನೋಡಿದಾಗ ಅಥವಾ ಕುರೂಪವನ್ನು ಕಂಡಾಗ, ಖುಷಿಯಾದಾಗ ಅಥವಾ ನೋವುಂಡಾಗ ನಮ್ಮ ಭಾವನೆಗಳಿಗೆ 'ಸುಂದರವಾಗಿದೆ..' ಅಥವಾ 'ಇದು ಚೆನ್ನಾಗಿಲ್ಲ' ಎನ್ನುವ ಮೂಲಕ ಪದಗಳ ರೂಪ ನೀಡುತ್ತೇವೆ. ಇಲ್ಲಿ ಮುಖ್ಯವಾಗುವುದು ಸಂವೇದನೆಗಳು

ಹಾಗಾದರೆ ಸೌಂದರ್ಯ ಎಂದರೇನು? ಸ್ವಚ್ಛತೆ, ಒಪ್ಪ ಓರಣವಾಗಿರುವ ಬಟ್ಟೆ, ಮುಗುಳ್ನಗೆ, ವಿನಯಶೀಲ ನಡೆ, ಬೇರೆಯವರ ಬಗ್ಗೆ ಸಹಾನುಭೂತಿ, ಸಮಯ ಪ್ರಜ್ಞೆ- ಇವೆಲ್ಲವೂ ಸೌಂದರ್ಯದಲ್ಲಿ ಮೇಳೈಸಿವೆ. ಆದರೆ ಇದೆಲ್ಲವೂ ಬರಿಗಣ್ಣಿಗೆ ಹೊರನೋಟಕ್ಕೆ ಕಾಣುವುದಷ್ಟೇ ಅಲ್ಲವೇ, ನಿಜ ಹೇಳಿ? ಬದುಕಿನ ಕಣಕಣಗಳಲ್ಲೂ ಸೌಂದರ್ಯ ತುಂಬಿದೆ. ಸುಂದರ ಮುಖ ನಿಮ್ಮದಾಗಿರಬಹುದು, ಆಕರ್ಷಕ ಮೈಕಟ್ಟು, ಚೆಂದವಾದ ಉಡುಗೆ ತೊಡುವ ಅಭಿರುಚಿಯನ್ನು ಮೈಗೂಡಿಸಿಕೊಂಡಿರಬಹುದು, ಸೌಜನ್ಯದ ನಡವಳಿಕೆ ಹೊಂದಿದವವರಾಗಿರಬಹುದು ಉತ್ತಮವಾಗಿ ಚಿತ್ರ ಬಿಡಿಸುವುದೋ ಅಥವಾ ಕಣ್ಮನ ತಣಿಸುವ ಪ್ರಕೃತಿ ಸೌಂದರ್ಯವನ್ನು ಪದಗಳಲ್ಲಿ ಸೆರೆಹಿಡಿಯುವ ಕಲೆಯನ್ನು ಕರಗತ ಮಾಡಿಕೊಂಡಿರಬಹುದು, ಆದರೆ ಆಂತರಿಕ ಉತ್ತಮಿಕೆಯ ಗುಣವೊಂದಿಲ್ಲದಿದ್ದರೆ ಅದು ಬರಿ ಬಾಹ್ಯ ಸೌಂದರ್ಯವಾಗಿ ಮಾತ್ರ ಉಳಿದುಬಿಡುತ್ತದಲ್ಲವೇ. ಆಂತರಿಕ ಸೌಂದರ್ಯ ನಿಮ್ಮ ವ್ಯಕ್ತಿತ್ವಕ್ಕೆ ಸೊಗಸನ್ನು ಕೊಡುತ್ತದೆ. ನಿಮ್ಮ ನಡೆ ನುಡಿಯಲ್ಲಿ ಅದೊಂದು ಬಗೆಯ ಆರ್ದ್ರತೆ ಮತ್ತು ಲಾಲಿತ್ಯವನ್ನು ತುಂಬುತ್ತದೆ. ಆಂತರಿಕ ಸೌಂದರ್ಯವಿಲ್ಲದೇ ಇದ್ದಾಗ ಲೌಕಿಕ ಬದುಕಿಗೊಂದು ಅರ್ಥವೇ ಇಲ್ಲದಂತಾಗುತ್ತದೆ ಎನ್ನುವುದನ್ನು ನೀವು ಒಪ್ಪುವಿರಾದರೆ ಸೌಂದರ್ಯದ ಬಗ್ಗೆ ಮಾತನಾಡೋಣ.

ವಾಸ್ತವದಲ್ಲಿ ಆಂತರಿಕ ಸೌಂದರ್ಯವನ್ನು ಹುಡುಕಿಕೊಳ್ಳಲು ಯಾವುದೇ ವ್ಯಕ್ತಿಗೆ ಪ್ರಾಥಮಿಕವಾಗಿ ನೆರವಾಗುವುದು ಶಿಕ್ಷಣದ ಕೆಲಸ. ಹಾಗೆಯೇ ನಮ್ಮ ಬದುಕಿನ ಬಗ್ಗೆ, ಸೌಂದರ್ಯದ ಬಗ್ಗೆ ಆಳವಾದ ಪ್ರೀತಿ ಮತ್ತು ಮೆಚ್ಚುಗೆ ಹೊಂದುವುದೂ ಅಗತ್ಯವೇ ಅರ್ಥಾತ್ ಮೊದಲು “ನಿನ್ನನ್ನು ನೀನು ಪ್ರೀತಿಸು” ಎನ್ನುವ ತತ್ವವನ್ನು ಅನುಸರಿಸುವುದು ಇದರಿಂದ ಕೀಳರಿಮೆ, ಸಂಕೋಚ, ನಾಚಿಕೆ, ಹಿಂಜೆರಿಕೆಗಳು ದೂರವಾಗಿ ಸಂಕುಚಿತ ಮನಸ್ಸೂ ಸಹ ವಿಕಸನಗೊಳ್ಳುತ್ತದೆ ಮಾನಸಿಕವಾಗಿ ವಿಕಸನಗೊಂಡರೆ ಜ್ಞಾನಾರ್ಜನೆಯ ಮಾರ್ಘ ಸುಲಲಿತವಲ್ಲವೇ?.

ಜ್ಞಾನವಿಲ್ಲದ ಮನಸ್ಸಿಗೆ ಸೌಂದರ್ಯವನ್ನು ಆಸ್ವಾದಿಸುವುದು ಸಾಧ್ಯವೇ? ಖಂಡಿತವಾಗಿಯೂ ಸಾದ್ಯವಿಲ್ಲ ಏಕೆಂದರೆ ಜ್ಞಾನವಿಲ್ಲದ ಮನಸ್ಸೂ ಸಹ ಸೀಮಿತವೇ ಅಥವಾ ಸಂಕುಚಿತವೆ ಆಗಿದೆ ಆದ್ದರಿಂದ ಅದು ಸೌಂದರ್ಯದ ಬಗ್ಗೆ ಮಾತನಾಡಬಹುದು, ಆದರೆ ತನ್ನದೇ ಸೀಮಿತ ಜಗತ್ತಿನಲ್ಲಿ ಸುತ್ತುವ ಮನಸ್ಸಿಗೆ ಸೌಂದರ್ಯವನ್ನು ನೋಡಿದಾಗ ಉಂಟಾಗುವ ಆನಂದವನ್ನು ಅನುಭವಿಸುವುದು ಸಾಧ್ಯವಿಲ್ಲ, ಜ್ಞಾನದ ಸ್ಪರ್ಶವಿಲ್ಲದ ಮನಸ್ಸು ಕುರೂಪಿಯೇ ಆಗಿದೆ. ಹಾಗಾಗಿ ಅದಕ್ಕೆ ಸೌಂದರ್ಯದ ಅನುಭವವೇ ಆಗದು. ಆದರೆ ಮನಸ್ಸು ಅಲೌಕಿಕ ಅನಗತ್ಯ ಆಕಾಂಕ್ಷೆಗಳಿಂದ ಮುಕ್ತವಾಗಬೇಕು. ತನ್ನದೇ ಆಸೆಗಳ ಬಲೆಯಲ್ಲಿ ಸಿಕ್ಕಿರಬಾರದು, ಆಫ್ಕೋರ್ಸ್ ಆಸೆ ಇರಲಿ ದುರಾಸೆ ಬೇಡ ಹಾಗೆಯೇ ಯಶಸ್ಸು ಬೇಕು ಹಾಗಂತ ಯಶಸ್ಸಿನ ಬೆನ್ನು ಹತ್ತಿ ಓಡುತ್ತಿರಬಾರದು. ಇಂತಹ ಮನಃಸ್ಥಿತಿ ಸೌಂದರ್ಯವನ್ನು ಕೊಡುತ್ತದೆ. ಇಂತಹ ಆಂತರಿಕ ಸೌಂದರ್ಯವಿದ್ದಾಗ ಕುರೂಪಿ ಮೊಗವೂ ಸುಂದರವಾಗಿ ಕಾಣುತ್ತದೆ.

ನಾವು ಎಷ್ಟೆಲ್ಲ ಕಷ್ಟಪಡುತ್ತೇವೆ ಆದರೆ ಸುಖವಿಲ್ಲ ಜೀವನದಲ್ಲಿ ಸಂತೋಷವಿಲ್ಲ, ಲಕ್ಷ ಲಕ್ಷ ಸಂಪಾದನೆ ಗಳಿಸಿದರೂ ಮನಸ್ಸಿಗೆ ನೆಮ್ಮದಿಯಿಲ್ಲ ಎನ್ನುವುದು ಅನೇಕರ ಗೊಣಗು, ದೇವರು, ಪೂಜೆ, ಪುನಸ್ಕಾರ ಮತ್ತು ಧ್ಯಾನ-ಯೋಗಗಳಲ್ಲಿ ತೊಡಗಿಸಿಕೊಂಡರೂ ಶಾಂತಿಯಿಲ್ಲ, ಮನಸ್ಸೆಂಬುದು ಸದಾ ಅಶಾಂತಿಯ ಕಡಲು ಎಂಬುದು ಬಹುತೇಕರ ದೂರು ಮತ್ತು ಗೊಂದಲ, ಈ ಸಾಲುಗಳನ್ನು ಬರೆಯುತ್ತಿದ್ದಂತೆ ಸ್ವಾಮೀ ವಿವೇಕಾನಂದರ ಮಾತುಗಳು ನೆನಪಾದವು.

 “ಒಮ್ಮೆ ತನ್ನ ಕೊಠಡಿಯ ಎಲ್ಲ ಬಾಗಿಲುಗಳನ್ನು ಮುಚ್ಚಿ ದೇವರಿಗಾಗಿ ಧ್ಯಾನ ಮಾಡಿದರೂ ಏನೂ ಪ್ರಯೋಜನವಾಗಲಿಲ್ಲವೆಂದು ಸ್ವಾಮಿ ವಿವೇಕಾನಂದರನ್ನು ಯುವಕನೊಬ್ಬ ಕೇಳಿದನಂತೆ, ಆಗ ವಿವೇಕಾನಂದರು, ''ವತ್ಸ, ನನ್ನ ಮಾತಿಗೆ ನೀನೇನಾದರೂ ಬೆಲೆ ಕೊಡುವುದಾದರೆ ನಾನು ನಿನಗೆ ಹೇಳುವುದಿಷ್ಟೆ. ಮೊದಲು ನಿನ್ನ ಕೊಠಡಿಯ ಬಾಗಿಲುಗಳನ್ನೆಲ್ಲ ತೆರೆದು ಕಣ್ಣು ಬಿಟ್ಟು ಹೊರಗೆ ನೋಡು. ನಿನ್ನ ನೆರೆಹೊರೆಯಲ್ಲಿ ಬಹಳಷ್ಟು ಜನರು ದುಃಖ-ದಾರಿದ್ರ್ಯದಲ್ಲಿ ಮುಳುಗಿದ್ದಾರೆ. ಅವರಲ್ಲಿಗೆ ಹೋಗಿ ಶಕ್ತಿಯನುಸಾರ ಉತ್ಸಾಹದಿಂದ ಸೇವೆಯನ್ನು ಮಾಡಬೇಕು. ರೋಗಿಗಳಿಗೆ ಔಷಧ ವಿತರಣೆಯ ವ್ಯವಸ್ಥೆಯನ್ನು ಮಾಡಿ ಆದಷ್ಟೂ ಉಪಚಾರ ಮಾಡು. ಹೊಟ್ಟೆಗಿಲ್ಲದವರಿಗೆ ಅನ್ನದಾನ ಮಾಡು; ನಿರಕ್ಷರಕುಕ್ಷಿಗಳಿಗೆ ನಿನಗೆ ಗೊತ್ತಿರುವಷ್ಟು ವಿದ್ಯಾದಾನ ಮಾಡು. ನಿನ್ನ ಸಹೋದರರನ್ನು ಈ ರೀತಿ ಸೇವೆ ಮಾಡಲು ಪ್ರೇರೇಪಿಸು. ಇದರಿಂದ ನಿನಗೆ ಶಾಂತಿ ಸಮಾಧಾನಗಳು ದೊರಕುತ್ತವೆ ಎಂದು ಹೇಳಬಲ್ಲೆ,'' ಎಂದರಂತೆ.

ಮನುಷ್ಯರಾಗಿ ಹುಟ್ಟಿದ ಮೇಲೆ ನಾಲ್ಕು ಜನಕ್ಕೆ ನೆರವಾಗಬೇಕು ಎನ್ನುವ ಮಾತಿದೆ. ನೆರವು ನೀಡುವುದರಿಂದ ಸಿಗುವ ಸುಖ ನಿಜಕ್ಕೂ ದೊಡ್ಡದು, ಹಂಚಿ ತಿನ್ನುವುದೊಂದು ದೊಡ್ಡ ಮೌಲ್ಯ. ಕರ್ಮಗಳನ್ನು ಸವೆಸಲು ದಾನ ಧರ್ಮಗಳನ್ನು ಮಾಡಿ ಎಂದು ಎಲ್ಲ ಧರ್ಮಗಳೂ ಒತ್ತಿ ಹೇಳುತ್ತವೆ. ದೀನ ದುರ್ಬಲರ ಸೇವೆಯಲ್ಲಿ ಸುಖವಿದೆ ಎನ್ನುವುದನ್ನು ಎಲ್ಲ ಸಾಧು- ಸಂತರು ಪ್ರತಿಪಾದಿಸಿದ್ದಾರೆ. “ನಾನು ಬದುಕಿರುವುದು ನನಗಾಗಿ ಅಲ್ಲ. ಇತರರಿಗಾಗಿ, ಎಲ್ಲರಿಗಾಗಿ. ಈ ಜೀವನದಲ್ಲಿ ಎಷ್ಟೆಲ್ಲ ಮಹಾನುಭಾವರ ನೆರವನ್ನು ಪಡೆದಿದ್ದೇನೆ. ಅದೆಲ್ಲವನ್ನೂ ಸಮಾಜ ಸೇವೆಯ ಮೂಲಕವೇ ತೀರಿಸಬೇಕು. ಇದು ಪ್ರತಿಯೊಬ್ಬರ ಕರ್ತವ್ಯ,'' ಎನ್ನುವ ಐನ್‌ಸ್ಟೀನ್ ಅವರ ಮಾತು ಎಷ್ಟು ಅರ್ಥಗರ್ಭಿತವಲ್ಲವೇ.

ನಾನಕ್ ಕೊಹ್ಲಿ ಎನ್ನುವ 81 ವರ್ಷದ ಅನಿವಾಸಿ ಭಾರತೀಯ ಉದ್ಯಮಿಯ ಬದುಕು ನಿಜಕ್ಕೂ ಆಸಕ್ತಿದಾಯಕವಾಗಿದೆ, ತಾವು ಸಮಾಜಕ್ಕೆ ನಾನಾ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದರಿಂದ ಅಪಾರ ಆನಂದವನ್ನು ಹೊಂದಿದ್ದಾಗಿ ಅವರು ಹೇಳಿಕೊಳ್ಳುತ್ತಾರೆ. ಅಂದು ತಾವು ಮಾಡಿದ ಕೆಲಸ ಮತ್ತು ಅದರಿಂದ ಹೊಂದಿದ ಪರಮಾನಂದವನ್ನು ಅವರು ತಮ್ಮ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ ಅದರ ಯಥಾವತ್ ಕನ್ನಡ ಅನುವಾದ ಇಲ್ಲಿದೆ ನೋಡಿ.
''2004
ರಲ್ಲಿ ಕುಶ್ವಂತ್ ಸಿಂಗ್‌ರನ್ನು ನಾನು ಭೇಟಿ ಮಾಡಿದೆ. ನನ್ನ ಪೋಷಕರ ಹೆಸರಲ್ಲಿ ಒಂದು ಚಾರಿಟಬಲ್ ಟ್ರಸ್ಟ್ ರೂಪಿಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಕಳುಹಿಸುವುದು ನನ್ನ ಆಲೋಚನೆಯಾಗಿತ್ತು, ಈ ಆಲೋಚನೆಯನ್ನು ನಾನು ಕುಶ್ವಂತ್ ಜತೆ ಹಂಚಿಕೊಂಡೆ. ಅವರು ಈ ಬಗ್ಗೆ ಅಷ್ಟೇನೂ ಆಸಕ್ತಿ ತೋರಲಿಲ್ಲ ಬದಲಿಗೆ, “ನಿನ್ನ ಉದ್ದೇಶ ಚೆನ್ನಾಗಿದೆ ಆದರೆ, ನಿನ್ನಿಂದ ನೆರವು ಪಡೆದು ವಿದೇಶ ಸೇರಿದ ವಿದ್ಯಾರ್ಥಿಗಳು, ಮತ್ತೆ ಸ್ವದೇಶಕ್ಕೆ ಮರಳುತ್ತಾರೆ ಇಲ್ಲಿಗೆ ಬಂದು ಸೇವೆ ಮಾಡುತ್ತಾರೆ ಎಂದು ಹೇಳಲಾಗದುಎಂದು ಬೆದರಿಸಿದರು. ಅಲ್ಲದೆ, 'ನೆರವಾಗುವ ಹಂಬಲ ನಿಜಕ್ಕೂ ನಿನ್ನಲ್ಲಿ ಇದ್ದರೆ ಮಜಾಬಿ ಸಿಖ್ ಬಾಲಕಿಯರತ್ತ ಗಮನ ನೀಡು ಅವರಿಗೆ ನೆರವಿನ ಅಗತ್ಯವಿದೆಎಂದು ಸಲಹೆ ನೀಡಿದರು.
ಅವರ ಮಾತಿನಂತೆಯೇ ನನ್ನ ಗೆಳೆಯ ಎಸ್ ಎಸ್ ಧನೋವಾ ಅವರ ಗ್ರಾಮವಾದ ಘರೋನಾದಲ್ಲಿ ಒಂದು ಕಂಪ್ಯೂಟರ್ ತರಬೇತಿ ಕೇಂದ್ರ ಆರಂಭಿಸಲು ಮುಂದಾದೆ. ಅದಕ್ಕೆ ಸೂಕ್ತ ಸ್ಥಳ, ಶಿಕ್ಷಕರು, ಇಪ್ಪತ್ತು ಕಂಪ್ಯೂಟರ್‌ಗಳು ಸೇರಿದಂತೆ ಎಲ್ಲವನ್ನೂ ವ್ಯವಸ್ಥೆಗೊಳಿಸಿದೆ. ಸ್ವಲ್ಪ ಸಮಯದಲ್ಲೇ ಇಂಥದ್ದೇ ಕೇಂದ್ರಗಳನ್ನು ಇನ್ನೂ 21 ಹಳ್ಳಿಗಳಲ್ಲಿ ಆರಂಭಿಸಿದೆ. ಅಲ್ಲಿ ಕಂಪ್ಯೂಟರ್ ತರಬೇತಿಯಲ್ಲದೆ, ಇಂಗ್ಲಿಷ್ ಸ್ಪೀಕಿಂಗ್ ಕ್ಲಾಸ್‌ಗಳೂ ನಡೆದವು. ಸಿಖ್ ಸಮುದಾಯದ ಸಾವಿರಾರು ಬಾಲಕಿಯರು ಇಲ್ಲಿ ತರಬೇತಿ ಪಡೆದು, ಡೇಟಾ ಎಂಟ್ರಿ ಉದ್ಯೋಗದಲ್ಲಿ ನೆಲೆ ಕಂಡರು. ತಮ್ಮ ಕಾಲ ಮೇಲೆ ತಾವು ನಿಂತರು. ಕೇವಲ ಬಾಲಕಿಯರಿಗಷ್ಟೇ ನೀವು ಏಕೆ ತರಬೇತಿ ನೀಡಿದಿರಿ? ಏಕೆ ಈ ಪಕ್ಷಪಾತ ಎನ್ನುವಿರೇನೋ? ಆದರೆ, ಬಾಲಕರಿಗಿಂತಲೂ ಇಂಥ ನೆರವು ಬಾಲಕಿಯರಿಗೆ ನಿಜಕ್ಕೂ ಬೇಕಾಗಿದೆ.
ಹಳ್ಳಿಯ ಬಡ ವರ್ಗದ ಹುಡುಗಿಯರಿಗೆ ನಮ್ಮ ಯೋಜನೆಯಿಂದ ನೆರವಾಗಿದೆ. ಕುಟುಂಬದ ಒಬ್ಬ ಬಾಲಕಿಗೆ ಇಂಥ ನೆರವು ಸಿಕ್ಕಿದರೆ ಸಾಕು ಆ ಕುಟುಂಬವೇ ನೆಮ್ಮದಿ ಕಾಣುತ್ತದೆ. ತರಬೇತಿ ಹೊಂದಿದ ಬಹುತೇಕ ಬಾಲಕಿಯರು ಮೆಡಿಕಲ್ ಟ್ರಾನ್ಸ್‌ಕ್ರಿಪ್ಟನ್ ಸೇರಿದಂತೆ ನಾನಾ ವೃತ್ತಿಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಇಲ್ಲಿ ಪಡೆದ ಆರು ತಿಂಗಳ ತರಬೇತಿ ಅವರ ಬದುಕಿಗೆ ಬೆಳಕಾಗಿದೆ ನಮ್ಮ ಅಂದಿನ ಪ್ರಯತ್ನ ಅನೇಕರಿಗೆ ಸ್ಫೂರ್ತಿಯಾಗಿದೆ, ಪಂಜಾಬ್‌ನ ಗ್ರಾಮೀಣ ಪ್ರದೇಶದಲ್ಲಿ ಇಂಥ ಜ್ಞಾನದ ದೀವಿಗೆಗಳು ಕಾಣುತ್ತಿವೆ ನನ್ನಲ್ಲಿರುವುದನ್ನು ಇಲ್ಲದ ವರಿಗೆ ಹಂಚುವ ಮೂಲಕ ಜನರ ಪ್ರೀತಿಯನ್ನು ನಾನು ಪಡೆದೆ. ಇತರರಿಗೆ ನೆರವಾಗುವ ಮೂಲಕವೇ ನಾನು ಮನುಷ್ಯನಾಗಿ ರೂಪುಗೊಳ್ಳಲು ಸಾಧ್ಯವಾಯಿತು.''

ಬದುಕು ಯೋಗ್ಯವಾಗಿರಬೇಕು ಎಂಬ ಆಸೆ ಯಾರಿಗಿರುವುದಿಲ್ಲ? ನಮ್ಮ ಭಾವಕೋಶ ಹೇಗಿರುತ್ತದೆಯೋ ಬದುಕು ಸಹ ಹಾಗೆಯೇ ಇರುತ್ತದೆ, ನಿಮ್ಮಲ್ಲಿ ನೋವು, ಕೀಳರಿಮೆ ಅಥವಾ ಭಯದ ಭಾವವಿದ್ದರೆ ಮೊದಲು ಆ ಮನಸ್ಥಿತಿಯಿಂದ ಹೊರಬನ್ನಿ. ಬದುಕಿನಲ್ಲಿ ಸಂಭವಿಸಿದ ಸಂತೋಷದ ಘಳಿಗೆಯನ್ನು, ನೀವು ಸಂಭ್ರಮಿಸಿದ ಘಟನೆಯನ್ನು ನೆನಪಿಸಿಕೊಳ್ಳಿ ನಿಮ್ಮ ಭಾವಕೋಶ ಆ ಖುಷಿಯಲ್ಲಿ ತುಂಬುವಂತೆ ನೋಡಿಕೊಳ್ಳಿ ಭಾವಕೋಶವನ್ನು ಸೆಟ್ ಮಾಡಿಕೊಂಡಂತೆಯೇ ನಮ್ಮ ವಿಚಾರಗಳನ್ನೂ ಯೋಗ್ಯವಾಗಿ ಹೊಂದಿಸಿಕೊಳ್ಳಬೇಕು ಒಳ್ಳೆಯತನ ಮತ್ತು ಜನರನ್ನು ಸಂಪರ್ಕಿಸುವಂಥ ಮೌಲ್ಯಗಳನ್ನು ನಾವು ಬದುಕಿನಲ್ಲಿ ತಂದುಕೊಳ್ಳಬೇಕು ಇಷ್ಟರ ಜತೆಗೆ ಬದುಕನ್ನು ಹಿತವಾಗಿಡಲು ಮಾನಸಿಕವಾಗಿ ಸಜ್ಜಾಗಬೇಕು.

ಅದಕ್ಕೆ ಪೂರಕವಾಗಿ ಇಲ್ಲೊಂದು ಸ್ವಾರಸ್ಯಕರ ಕತೆ ಇದೆ ನೋಡಿ ಇದನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರೋ ಗೊತ್ತಿಲ್ಲ, ಒಮ್ಮೆ ಚೀನಾ ದೇಶದ ಕುಗ್ರಾಮವೊಂದರಲ್ಲಿ ಸುಪ್ರಾಪ್ತ ಬಾಲಕನೊಬ್ಬ (ಅತ್ತ ಪ್ರಾಪ್ತನೂ ಅಲ್ಲದ ಇತ್ತ ಅಪ್ರಾಪ್ತನೂ ಅಲ್ಲದವರನ್ನು ಸುಪ್ರಾಪ್ತರೆನ್ನಬಹುದೇನೋ ನನಗೂ ಸರಿಯಾಗಿ ಗೊತ್ತಿಲ್ಲಾ ಗೊತ್ತಿದ್ದವರು ತಿಳಿಸಿ) ಆಗಾಗ ಆಕಾಶವನ್ನು ನೋಡುತ್ತಲೇ ಇದ್ದ ಆತನ ಮುಖದಲ್ಲಿ ಭಯ ಭೀತಿಗಳು ತುಂಬಿದ್ದವು ಆಕಾಶ ಯಾವಾಗ ಬೇಕಾದರೂ ಕುಸಿಯಬಹುದು ಹೀಗಾದರೆ ಅಪಾಯ ತಪ್ಪದು ಎನ್ನುವ ಆತಂಕ ಆತನದು, ಆಕಾಶ ಕಂಬಗಳ ಮೇಲೆ ನಿಂತಿದ್ದರೆ ಕುಸಿಯುವ ಭಯ ಇರುತ್ತಿರಲಿಲ್ಲ ಆದರೆ ಅದು ತೇಲುತ್ತಿದೆ ಕುಸಿದರೆ ಮಾಡುವುದಾದರೂ ಏನು ಎಂಬ ದಿಗಿಲಿನಿಂದ ಕಾಡಿಗೆ ಓಡಿದ ಕಾಡಲ್ಲಿ ಸಾಕಷ್ಟು ಮರಗಳಿದ್ದು ಕಂಬಗಳಂತೆ ಆಕಾಶವನ್ನು ಹೊರುತ್ತವೆ ಎಂದು ಆತ ತುಸು ನೆಮ್ಮದಿಯ ನಿಟ್ಟುಸಿರುಬಿಟ್ಟ. ಅದೇ ಕಾಡಿಗೆ ಸನ್ಯಾಸಿಯೊಬ್ಬರು ಬಂದರು ಅವರನ್ನುದ್ದೇಶಿಸಿ, ''ಕಂಬಗಳ ಆಧಾರವಿಲ್ಲದ ಆಕಾಶ ಯಾವಾಗ ಬೇಕಾದರೂ ಬೀಳಬಹುದು ಎನ್ನುವ ಭಯ ನಿಮ್ಮಲ್ಲಿ ಇಲ್ಲವೇ?'' ಎಂದು ಬಾಲಕ ಪ್ರಶ್ನಿಸಿದ, ಆ ಮಾತಿಗೆ ಮುಗುಳ್ನಕ್ಕ ಸನ್ಯಾಸಿ, ''ಮಗು, ನಿಜಕ್ಕೂ ಕಂಬಗಳ ಆಧಾರದ ಮೇಲೆ ಆಕಾಶ ನಿಂತಿದೆ, ಆದರೆ ಅದನ್ನು ನೋಡಲು ವಿಶೇಷ ಕಣ್ಣುಗಳು ಬೇಕು ನಮಗೆ,'' ಎಂದರು.
''
ಹೌದಾ, ನಾನು ಅಂಥ ವಿಶೇಷ ಕಣ್ಣು ಪಡೆಯಬಹುದಾ? ದಯವಿಟ್ಟು ಸಹಾಯ ಮಾಡಿ ಎಂದು ಬಾಲಕ ಬೇಡಿಕೊಂಡ ಸರಿ ಹಾಗಾದರೆ ಈಗಲೇ ನೀನು ಪಕ್ಕದ ಹಳ್ಳಿಗೆ ಹೋಗಿ ತುಸು ಆಹಂಕಾರ ಮತ್ತು ಒರಟಾಗಿಯೇ ತಿನ್ನಲು ಆಹಾರವನ್ನು ಕೊಡುವಂತೆ ಜನರನ್ನು ಕೇಳು ಅವರು ಕೊಟ್ಟ ಆಹಾರದೊಂದಿಗೆ ಇಲ್ಲಿಗೆ ಬಾ ಎಂದರು, ಬಾಲಕ ಹಳ್ಳಿಗೆ ಹೋಗಿ ತನಗೆ ಆಹಾರ ಕೊಡುವಂತೆ ಜಂಭದಿಂದಲೇ ಕೇಳಿದ ಬಹುತೇಕರು ಏನನ್ನೂ ಕೊಡದೇ ಬಾಗಿಲು ಮುಚ್ಚಿದರು, ಆದರೆ, ಅಚ್ಚರಿಯ ಘಟನೆಯೊಂದು ನಡೆಯಿತು ಎಲ್ಲರನ್ನೂ ಕೇಳಿದಂತೆಯೇ ''ನನಗೆ ತಿನ್ನಲು ಏನಾದರೂ ಕೊಡಿ,'' ಎಂದು ಒರಟುತನ ಬೆರೆತ ಗಟ್ಟಿ ದನಿಯಲ್ಲಿಯೇ ಆ ಬಾಲಕ ಅಲ್ಲೂ ಕೇಳಿದ ಆ ಮನೆಯ ಮಹಿಳೆ ಎರಡು ನಿಮಿಷದ ನಂತರ ಆಹಾರದೊಂದಿಗೆ ಹೊರಬಂದು, ''ನನ್ನನ್ನು ಕ್ಷಮಿಸು, ಮಗುವಿಗೆ ಮೊಲೆಯೂಡಿಸುತ್ತಿದ್ದೆ ಹೀಗಾಗಿ ಬರಲು ತಡವಾಯಿತು,'' ಎಂದಳು ಅವಳಿಂದ ಆಹಾರ ಪಡೆದ ಬಾಲಕ ಕಾಡಿಗೆ ಬಂದು ನಡೆದದ್ದನ್ನು ಸನ್ಯಾಸಿಗೆ ವಿವರಿಸಿದ. ''ಆ ಮಹಿಳೆಯ ಒಳ್ಳೆತನವೇ ಆಕಾಶ ಬೀಳದಂತೆ ತಡೆದಿರುವ ಕಂಬಗಳಲ್ಲಿ ಒಂದಾಗಿದೆ,'' ಎಂದು ಸನ್ಯಾಸಿ ಹೇಳಿದರು ಹೌದು, ಪ್ರತಿಯೊಂದು ಸದುದ್ದೇಶದ ಕ್ರಿಯೆ ಸಹ ಆಕಾಶ ಹೊತ್ತಿರುವ ಕಂಬವೇ ಆಗಿದೆ ಅವು ಹೊರನೋಟಕ್ಕೆ ಕಾಣುವುದಿಲ್ಲ, ಒಳಗಣ್ಣಿಗೆ ಮಾತ್ರ ಗೋಚರ ಇಂಥ ನಂಬಿಕೆಯಿಂದ ನಾವು ಸಾಗಿದಾಗಲೇ ಹೆಚ್ಚಿನ ಶಕ್ತಿ ಚೈತನ್ಯಗಳು ನಮ್ಮದಾಗುತ್ತವೆ ಅನಾಮಿಕ ಮೂಲದಿಂದ ನಾವು ಈ ಶಕ್ತಿಯನ್ನು ಹೊಂದುತ್ತೇವೆ.

ಒಹೋ, ಒಳ್ಳೆತನವೇ ಬದುಕಿನ ಹಾದಿಯೇ? ಹಾಗಾದರೆ, ಒಳ್ಳೆಯವರಾದ ಅನೇಕರರು ಏಕೆ ಯಶಸ್ಸು ಪಡೆದಿಲ್ಲ? ಇಲ್ಲಿ ಒಳ್ಳೆತನ ಸೋತಿದೆಯೇ? ಎನ್ನುವ ಪ್ರಶ್ನೆ ಕೇಳಬಹುದು, ಇಂದಿನ ಕಾಲಕ್ಕೆ ಹಾಗೆ ಕೇಳುವುದು ಸಮಂಜಸವೂ ಹೌದು, ಆದರೆ ಬದುಕನ್ನು ಕಟ್ಟಿಕೊಳ್ಳಲು ಒಳ್ಳೆತನ ಎನ್ನುವುದು ಬುನಾದಿಯಾಗಬೇಕು ಹಾಗಂತ ಶ್ರೀರಾಮನಂತೆ ಕಾಡಿಗೆ ಹೋಗಬೇಕಾಗಿಲ್ಲ ಸನ್ನಡತೆಯಲ್ಲಿ ಸಾಗುವುದನ್ನು ರೂಡಿಸಿಕೊಲ್ಲುವುದು ಮುಖ್ಯ ಆದರೆ ಇಷ್ಟರಿಂದಲೇ ಯಶಸ್ಸಿನ ತುದಿ ತಲುಪುತ್ತೇವೆ ಎಂದರ್ಥವಲ್ಲ ಅದು ಬೇಕೆನ್ನುವ ಹಂಬಲ ನಿಮ್ಮೊಳಗಿದ್ದರೆ ಒಳ್ಳೆತನದ ಜತೆ ಜಾಣತನವೂ ಇರಬೇಕು, ಈ ನಿಟ್ಟಿನಲ್ಲಿ ನಾವು ಸಾಗಬೇಕು ಕೇವಲ ಕಷ್ಟಪಟ್ಟು ಕೆಲಸ ಮಾಡುವುದರಿಂದ ಗೆಲ್ಲುತ್ತೇವೆ ಎಂದು ಜನ ಯೋಚಿಸಬಹುದು, ಇದು ಸುಳ್ಳು ನಂಬಿಕೆ, ಇದರ ಜತೆಗೆ ಚುರುಕಾಗಿ, ಚಾಕಚಕ್ಯತೆಯಿಂದ ನಾವು ಕೆಲಸ ಮಾಡಬೇಕು ಆಗ ಒಳ್ಳೆತನ ಎನ್ನುವುದು ಯಶಸ್ಸಿನ ಜೊತೆಗೆ ಅಧ್ಯಾತ್ಮಿಕ ಚೈತನ್ಯವನ್ನೂ ನೀಡುತ್ತದೆ.

ಒಂದು ವಿಷಯವನ್ನು ನೀವು ಗಮನಿಸಿರಬಹುದು ಭಾರತದ ಆರ್ಥಿಕತೆಯ ಗ್ರಾಫ್ ಏರುತ್ತ ಹೋದ ಬೆನ್ನಲ್ಲೇ ಆಧುನಿಕ ಅಧ್ಯಾತ್ಮಿಕ ಗುರುಗಳ ಜನಪ್ರಿಯತೆಯ ಗ್ರಾಫ್ ಕೂಡ ಏರತೊಡಗಿದೆ, ಆರ್ಥಿಕ ಪ್ರಗತಿ, ಅದರ ಬೆನ್ನು ಹತ್ತಿದ ದುಡಿಮೆ, ಅದರಿಂದ ಉಂಟಾಗುವ ಒತ್ತಡಗಳು, ಒತ್ತಡಗಳಿಂದ ಕಾಯಿಲೆ, ಸಹಜೀವಿಗಳಿಂದ ದೂರ ಉಳಿಯುವ ಸಂಕುಚಿತ ಮನಸ್ಥಿತಿ ಇತ್ಯಾದಿ ...... ಈ ಎಲ್ಲವನ್ನೂ ಮ್ಯಾನೇಜ್ ಮಾಡಲು ಸಿದ್ಧಪುರಾತನ ಅಧ್ಯಾತ್ಮ ಹೊಸಯುಗದ ಗುರುಗಳು ಆಕರ್ಷಣೆಯ, ಆಸರೆಯ ಕೇಂದ್ರಗಳಾಗತೊಡಗಿದ್ದು ಇದೇ ಕಾರಣದಿಂದ ಎಂದರೆ ತಪ್ಪಾಗಲಾರದು, ಇವತ್ತು ಇಡೀ ಜಗತ್ತು ಅಧ್ಯಾತ್ಮಿಕ ಆಸರೆಗಾಗಿ ಭಾರತದತ್ತ ಮುಖ ಮಾಡಿದೆ ಭಾರತದ ಚಿಂತನೆಗಳನ್ನು ಅನುಸರಿಸುವ, ಬೋಧಿಸುವ ಸ್ಥಳೀಯ ಗುರುಗಳಿಗೂ ವಿದೇಶಗಳಲ್ಲಿ ಮನ್ನಣೆ ಸಿಗುತ್ತಿದೆ ಈ ಅಗತ್ಯಕ್ಕೆ ತಕ್ಕ ಹಾಗೆ ನಮ್ಮ ಆಧುನಿಕ ಗುರುಗಳು ಸಂವಹನದ ಎಲ್ಲ ಸಾಧ್ಯತೆಗಳನ್ನೂ ತಮ್ಮದಾಗಿಸಿ ಕೊಳ್ಳುತ್ತಿದ್ದಾರೆ. ಇಂದಿನ ಅಧ್ಯಾತ್ಮಿಕ ಗುರುಗಳಲ್ಲಿ ಸನ್ಯಾಸಿಗಳು ಮಾತ್ರವಲ್ಲದೆ ಬ್ರಹ್ಮಚಾರಿಗಳೂ, ಸಂಸಾರಿಗಳೂ ಇದ್ದಾರೆ. ಕಾವಿ ಮಾತ್ರವಲ್ಲದೆ ಬಿಳಿ ಉಡುಪಿನಲ್ಲೂ ಇರುತ್ತಾರೆ ಅಷ್ಟೇ ಯಾಕೆ? ಸೂಟು-ಬೂಟುಧಾರಿಗಳೂ ತಮ್ಮ ವಿಚಾರ ಮತ್ತು ತಟ್ಟುವಿಕೆಗಳಿಂದಾಗಿ ಸಮರ್ಥ ಅಧ್ಯಾತ್ಮಿಕ ಗುರುಗಳೆಂದು ಗುರುತಿಸಲ್ಪಡುತ್ತಿದ್ದಾರೆ, ಈ ಪಟ್ಟಿಯಲ್ಲಿ ಹೆಂಗಸರೂ ಸೇರಿದ್ದಾರೆ ಆಧುನಿಕ ಪೋಷಾಕಿನ ಒಳಗೆಯೂ ಶುದ್ಧ ಅಧ್ಯಾತ್ಮದ ಚಿಂತನೆ ಮಾಡುತ್ತಾ, ಅದನ್ನೇ ಜನರೊಂದಿಗೆ ಹಂಚಿಕೊಳ್ಳುತ್ತಾ, ಅದನ್ನೊಂದು ಬದುಕಿನ ದಾರಿಯಾಗಿ ಮಾಡಿಕೊಂಡವರೂ ಇಲ್ಲದಿಲ್ಲ.

ಬಡವರು ಮಾತ್ರ ಅಧ್ಯಾತ್ಮದತ್ತ ಒಲವು ಹೊಂದಿರುತ್ತಾರೆ ಅಥವಾ ಅಂತಹ ಒಲವು ಇರುವವರು ಬಡವರಾಗಿರಬೇಕು ಅನ್ನುವುದು ತಪ್ಪು ಅಪೇಕ್ಷೆ, ಹಣ ಇದ್ದವರಲ್ಲಿ ಅಧ್ಯಾತ್ಮಿಕ ಮನೋಭಾವ ಬಂದರೆ, ಬಡವರ ಸಂಖ್ಯೆ ಕಡಿಮೆ ಮಾಡುವತ್ತ ಯೋಚಿಸುವರಲ್ಲವೇ? ಎಂದು ಪ್ರಶ್ನಿಸುವ ಪಂಡಿತ್ ರವಿಶಂಕರ್ ಗುರೂಜಿಯಂತವರು ತಮ್ಮ ಆಧ್ಯಾತ್ಮಿಕ ಬದುಕನ್ನು ಅನುಸರಿಸುವ ಬಗ್ಗೆ ಈವರೆಗಿನ ಎಲ್ಲಾ ಅದ್ಭುತಗಳನ್ನು ಮುರಿದಿದ್ದಾರೆ ಎಂದರೆ ತಪ್ಪಾಗಲಾರದು. ಇಂದಿನ ಯುಗಕ್ಕೆ ತಕ್ಕಂತೆ ಅಧ್ಯಾತ್ಮದ ಪರಿಭಾಷೆ ಬದಲಾಗಿದೆ ಅದು ಬ್ರಹ್ಮಜ್ಞಾನವನ್ನು ಪಡೆಯುವ ನಿಟ್ಟಿನ ದಾರಿಯಾಗಿ ಉಳಿದಿಲ್ಲ ದಿನದ ಬದುಕಿನ ಸ್ಪರ್ಧೆ ಮತ್ತು ಜಂಜಾಟದಲ್ಲಿ ಮನುಷ್ಯರಾಗಿ ಉಳಿಯುವುದು ಹೇಗೆ ಎನ್ನುವ ಸವಾಲಿಗೆ ಉತ್ತರವಾಗಿ ಬದಲಾಗಿದೆ, ಆದ್ದರಿಂದಲೇ, ಆಧುನಿಕ ಗುರುಗಳು ಧ್ಯಾನದ ಜತೆಜತೆಗೆ ಆರೋಗ್ಯ, ಶಿಕ್ಷಣ, ಪರಿಸರ ನಿರ್ವಹಣೆ, ಸಂವಹನದ ರೀತಿ ನೀತಿ, ಒತ್ತಡ ನಿರ್ವಹಣೆಗಳ ಬಗ್ಗೆಯೂ ಬೋಧನೆ ಮಾಡುತ್ತಾರೆ. ಇವೆಲ್ಲವನ್ನೂ ಪ್ರಾಚೀನ ಭಾರತೀಯ ಸಿದ್ಧಾಂತಗಳು ಮತ್ತು ಗ್ರಂಥಗಳ ಆಧಾರದ ಮೇಲೆಯೇ ಮಾಡುವುದರಿಂದ ಅವುಗಳಿಗೆ ಅಧಿಕೃತತೆ ಇರುತ್ತದೆ. ಏನೇ ಆದರೂ 'ಒಳ್ಳೆಯದು ಎಲ್ಲ ಕಡೆಗಳಿಂದಲೂ ಹರಿದು ಬರಲಿ' ಎನ್ನುವ ವೇದವಾಕ್ಯವನ್ನು ಅನುಸರಿಸೋಣ.

ಬದುಕೆಂಬುದು ಬಹಳ ಅಲ್ಪವಾದುದು. ನೀರ ಮೇಲಿನ ಗುಳ್ಳೆಯಿದ್ದಂತೆ. ಈ ಕ್ಷಣವಿದ್ದವರು, ಮರುಕ್ಷಣ ಇರದೆ ಹೋಗಬಹುದು. ಹಾಗೆಂದು, ಸಾವಿನ ಭಯ ಸದಾ ಇರಬೇಕು ಎಂದರ್ಥವಲ್ಲ. ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ತ್ವರಿತ ಪ್ರಯತ್ನಗಳನ್ನು ಮಾಡಬೇಕು ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು.

ನೀವು ಯಾರಿಗಾದರೂ ಏನನ್ನಾದರೂ ದಾನ ಮಾಡುವಾಗ ಸುಮ್ಮನೆ ನೀಡುವಿರೋ, ಇಲ್ಲವೇ ಅದರ ಹಿಂದಿನ ಲಾಭ-ನಷ್ಟಗಳನ್ನು ಲೆಕ್ಕ ಹಾಕುವಿರೋ? ಪಾಪ ಭೀತಿಯಿಂದಲೋ ಅಥವಾ ಸ್ವಾರ್ಥದಿಂದಲೋ, ಅಂದರೆ ನಾನು ಮಾಡುವ ದಾನವನ್ನು ದೇವರು ಮೆಚ್ಚಲೆಂದು ನೀಡಿದರೂ ತೊಂದರೆಯೇನಿಲ್ಲ ಆತ್ಮತೃಪ್ತಿಗಾಗಿ ದಾನ ಪ್ರಕ್ರಿಯೆ ನಡೆದರೂ ಸರಿ ಆದರೆ, ಕೊಡುವ ದಾನವು ಉನ್ನತ ಮೌಲ್ಯವನ್ನು ಆಧರಿಸಿದ್ದರೆ ಒಳ್ಳೆಯದು.
ಕೋಟ್ಯಧಿಪತಿಗಳು ಸಮಾಜ ಕಲ್ಯಾಣಕ್ಕಾಗಿ ದಾನ ನೀಡುವ ಪ್ರಸಂಗಗಳನ್ನು ನಾವು ನೋಡುತ್ತಿರುತ್ತೇವೆ, ಇಂಥ ವ್ಯಕ್ತಿಗಳನ್ನು ಗುರ್ತಿಸುವ philanthropist ಎನ್ನುವ ಪದವನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬಳಸುತ್ತಿರುತ್ತೇವೆ ಲೋಕೋಪಕಾರಿ, ದಾನಿ ಅನ್ನುವುದು ಈ ಪದದ ಅರ್ಥ. ಇದು ಗ್ರೀಕ್‌ನ  'philas' ಮತ್ತು 'anthropos' ಎಂಬ ಎರಡು ಪದಗಳು ಸೇರಿ ರೂಪುಗೊಂಡಿದೆ. 'philas' ಎಂದರೆ ಪ್ರೀತಿಸುವುದು, 'anthropos' ಎಂದರೆ ಮನುಷ್ಯ ಎನ್ನುವ ಅರ್ಥವಿದೆ. ಅಂದರೆ, ಪ್ರೀತಿಯನ್ನು ಹೊಂದಿರುವ, ಇಲ್ಲವೇ ಪ್ರೇಮಮಯಿ ಎಂಬುದು ಇದರ ಒಟ್ಟು ತಾತ್ಪರ್ಯ, ನಾವೆಲ್ಲರೂ ದಾನಿಗಳಾಗಲು ಸಾಧ್ಯವಿಲ್ಲವೇ-ಏಕಾಗಬಾರದು? ಹೃದಯದ ತುಂಬಾ ಒಲವು ತುಂಬಿಕೊಂಡು ಅದನ್ನು ಹಂಚಲು ಮುಂದಾದರೆ ಖಂಡಿತ ದಾನಿಯಾಗಿ ರೂಪಾಂತರಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ದಾನ ಧರ್ಮ ಮಾಡುವಾಗ ಕೆಲವು ಅನುಮಾನಗಳು ಮೂಡುವುದುಂಟು, ಸದುದ್ದೇಶದಿಂದ ನಾವು ಸಂಪಾದಿಸಿದ ಹಣವನ್ನು ದಾನ ಮಾಡುತ್ತೇವೆ ನಿಜಕ್ಕೂ ಅದು ಅರ್ಹರಿಗೆ ಸಂದಾಯವಾಗಿದೆಯೇ? ನಮ್ಮ ಕಷ್ಟಾರ್ಜಿತವು ಯಾರೋ ಅಪಾತ್ರರಿಗೆ ಇಲ್ಲವೇ ಯಾರದೋ ಮೋಜಿಗೆ ವ್ಯಯ ಆಗುತ್ತಿದೆಯೇ ಎಂದು ಅನೇಕ ಸಲ ಅನುಮಾನ ಮೂಡುತ್ತದೆ ಎಚ್ಚರಿಕೆ ನಿಜಕ್ಕೂ ಅಗತ್ಯ ಆದರೆ ಇದನ್ನೇ ಮುಂದಿಟ್ಟುಕೊಂಡು ನಮ್ಮ ಕಲ್ಯಾಣ ಗುಣಗಳಿಗೆ ಪೂರ್ಣ ವಿರಾಮ ಹಾಕುವುದು ಸಲ್ಲದು. ದಾನ ಧರ್ಮಗಳಿಗೆ ಎಲ್ಲ ಧರ್ಮಗಳು ಪ್ರಾಧಾನ್ಯ ನೀಡಿವೆ ನಮ್ಮ ಆದಾಯದಲ್ಲಿ ಒಂದಿಷ್ಟು ಭಾಗವನ್ನು ದಾನ ಧರ್ಮಗಳಿಗೆ ತೆಗೆದಿರಿಸಬೇಕೆಂದು ಅಧ್ಯಾತ್ಮ ಪಥದಲ್ಲಿ ಸಾಗುವ ಮಂದಿಗೆ ಗುರುಗಳು ಹೇಳುತ್ತಾರೆ, ಜೀವನಶೈಲಿಯಲ್ಲಿ ದಾನವೆನ್ನುವುದು ಒಂದು ಭಾಗ ನೀವು ದುಡಿದ ಹಣದಲ್ಲಿ ಒಂದಿಷ್ಟು ಭಾಗವನ್ನು ತೆರಿಗೆ ರೂಪದಲ್ಲಿ ಸರಕಾರಕ್ಕೆ ಪಾವತಿಸಬೇಕು, ಸಾರ್ವಜನಿಕರ ಕುಂದು ಕೊರತೆ, ಆರೋಗ್ಯ, ಶಿಕ್ಷಣ ಮತ್ತಿತರ ಕಾರ್ಯಕ್ರಮಕ್ಕೆ ತೆರಿಗೆ ಹಣ ಬಳಕೆಯಾಗುತ್ತದೆ ಸಮಾಜಸೇವೆಗೆ ನಮ್ಮ ತೆರಿಗೆ ಹಣ ಬಳಕೆಯಾಗುತ್ತದೆ ಅನ್ನುವುದಾದರೆ, ಇನ್ನಷ್ಟು ದಾನ ಧರ್ಮ ಮಾಡುವ ಅಗತ್ಯವಾದರೂ ಏನಿದೆ ಎಂದು ನೀವು ಕೇಳಬಹುದು ಸರಕಾರದ ಕಾರ್ಯ ಚಟುವಟಿಕೆ, ಯೋಜನೆಗಳು ಫಲಾನುಭವಿಗಳನ್ನು ಮುಟ್ಟುವ ಬಗೆಯನ್ನು ಗಮನಿಸಿದರೆ ಪ್ರಶ್ನೆಗೆ ಉತ್ತರ ಸಿಕ್ಕಿದಂತೆ ಆಗುತ್ತದೆ.

ಸಮಾಜ ಸೇವೆಯಲ್ಲಿ ತೊಡಗಿರುವ ಎನ್‌ಜಿಒ ಒಂದಕ್ಕೆ 5,000 ರೂಪಾಯಿ ದಾನ ನೀಡುವಿರಿ ಎಂದುಕೊಳ್ಳೋಣ, ಆ ಎನ್‌ಜಿಒದ ಕರಪತ್ರದ ಮೇಲಿನ ಅಮಾಯಕ ಅನಾಥ ಮಗುವಿನ ಚಿತ್ರ ನಿಮ್ಮ ಕಣ್ಣಲ್ಲಿ ತುಂಬಿಕೊಳ್ಳುತ್ತದೆ ಕೊಟ್ಟ ಹಣ ಸಾರ್ಥಕವಾಯಿತು ಎಂಬ ಭಾವ ಮೂಡುತ್ತದೆ. ಆದರೆ, ಕೊಟ್ಟ ಹಣ ಸಮರ್ಪಕವಾಗಿ ಬಳಕೆಯಾಗುತ್ತಿದೆ ಎಂಬುದಕ್ಕೆ ಪುರಾವೆ ಏನಿದೆ? ತಾವು ಕೊಟ್ಟ ಹಣ ನೊಂದವರಿಗೆ-ದುರ್ಬಲರಿಗೆ ತಲುಪಬೇಕು ಕಷ್ಟದಲ್ಲಿರುವ ಜನರಿಗೆ ಒಂದಿಷ್ಟಾದರೂ ಅನುಕೂಲವಾಗಬೇಕು ಎಂದು ಪ್ರತಿಯೊಬ್ಬ ದಾನಿಯೂ ಬಯಸುತ್ತಾನೆ ಇಂಥ ಬಯಕೆ ಸಹಜವಾದುದು. ಆದರೆ, ನಮ್ಮಿಂದ ನೆರವು ಪಡೆದ ಜನ, ಎನ್‌ಜಿಒ ಅಥವಾ ಸರಕಾರ, ಅದರೊಳಗಿನ ಜನ ಪ್ರಾಮಾಣಿಕರು ಎನ್ನುವುದಕ್ಕೆ ಯಾವ ಪುರಾವೆಯೂ ಇಲ್ಲ ನಾವು ನೀಡಿದ ತೆರಿಗೆ ಅಥವಾ ದಾನ ರೂಪದ ಹಣವು ಫಲಾನುಭವಿಯನ್ನು ತಲುಪುವ ಹೊತ್ತಿಗೆ ಸವೆದು ಕರಗಿ ಹೋಗಿರುತ್ತದೆ ಒಂದು ನೂರು ಕೆ.ಜಿ ಆಹಾರ ಧಾನ್ಯವನ್ನು ಫಲಾನುಭವಿಗೆ ತಲುಪಿಸಲು ಹೊರಟರೆ, ಈ ನಡುವಿನ ವ್ಯವಸ್ಥೆಯೇ ಎಲ್ಲವನ್ನೂ ನುಂಗಿ ಕಡೆಗೆ ಕಟ್ಟಕಡೆಯ ಫಲಾನುಭವಿಗೆ ಖಾಲಿ ಗೋಣಿಚೀಲ ಮಾತ್ರ ಉಳಿಯುತ್ತದೆ. ಈ ಮಾತ್ರಕ್ಕೆ ದಾನ ಏಕೆ ಮಾಡಬೇಕು ಎಂದು ಕೇಳಿಕೊಂಡು ಸಿನಿಕರಾಗುವುದು ಬೇಕಿಲ್ಲ ಕೊಡುವ ಕೈ ನಮ್ಮದಾಗಲಿ. ಏಕೆಂದರೆ, ಕೊಡುವುದು ನಮ್ಮ ಜೀವಿತದ ಒಂದು ಭಾಗ ಮನುಷ್ಯ ಸಹಜ ವರ್ತನೆ. ದಿಟವಾಗಿಯೂ, ಸಮಾಜ ಸೇವೆ ಅನ್ನುವುದು ಮನೆಯಿಂದಲೇ ಆರಂಭಗೊಳ್ಳಬೇಕು ನಾವು, ಮನೆ ಮಕ್ಕಳು ಎಂದು ಯೋಚಿಸುವುದರ ಹೊರತಾಗಿ ನಮ್ಮ ಕೈಲಾಗುವ ಸೇವೆಯನ್ನು ಸಮಾಜ, ಸಮುದಾಯಕ್ಕೆ ವಿಸ್ತರಿಸಬೇಕು.

ನೀವು, ನಿಮ್ಮ ಸಮುದಾಯದಿಂದ ಇತರರ ತನಕ ಸೇವೆ ವಿಸ್ತರಣೆಗೊಳ್ಳಬೇಕ. ನಮ್ಮ ಈ ಜಗತ್ತು ಸ್ವಾರ್ಥರಹಿತ ಸೇವೆಯೆಂಬ ಕೊಂಡಿಯಿಂದಲೇ ಬೆಸೆದುಕೊಂಡಿದೆ ನಿಮಗೆ ಓದಲು ಬರುತ್ತದೆಯೇ? ಹೌದು ಅನ್ನುವುದಾದರೆ ಓದು ನಿಮಗಷ್ಟೆ ಸೀಮಿತವಾಗಬಾರದು. ಅದನ್ನು ಅಗತ್ಯ ಇರುವವರಿಗೆ ದಾಟಿಸಬೇಕು ಕುರುಡನೊಬ್ಬನ ಅಗತ್ಯಕ್ಕೆ ಬೇಕಾದದ್ದನ್ನು ಓದಿ ಹೇಳಬೇಕು ನಿಮಗೆ ಬರೆಯಲು ಬರುತ್ತದೆ ಅನ್ನುವುದಾದರೆ, ಯಾರೋ ಒಬ್ಬ ಅನಕ್ಷರಸ್ಥ ಬರೆಯಬೇಕಾದ ಪತ್ರಕ್ಕೆ, ಇಲ್ಲವೆ ತುಂಬಬೇಕಾದ ಅರ್ಜಿಗೆ ನೆರವಾಗಬೇಕು. ನಿಮಗೆ ಹಸಿವಿಲ್ಲ ಅನ್ನುವುದಾದರೆ ನಿಮ್ಮ ಆಹಾರವನ್ನು ಹಸಿದವನಿಗೆ ನೀಡಬಹುದು ನಿಮ್ಮಲ್ಲಿ ಸಂತೋಷವಿದ್ದರೆ, ಶಾಂತಿ ಕಂಡುಕೊಂಡಿದ್ದರೆ ಅದನ್ನು ದುರದೃಷ್ಟವಂತರಿಗೂ ತಲುಪಿಸಬಹುದು. ಒಟ್ಟಿನಲ್ಲಿ ನಿಮ್ಮ ಹಿತಾನುಭವ ಇತರರಿಗೂ ದಕ್ಕುವಂತೆ ನೋಡಿಕೊಳ್ಳಿ ನಮಗೆ ನಿಜಕ್ಕೂ ಏನನ್ನಾದರೂ ಕೊಡುವ ಶಕ್ತಿ ಇದ್ದೇ ಇದೆ ಅದನ್ನು ಬಳಸಿಕೊಳ್ಳಲು ಒಳಗಣ್ಣನ್ನು ತೆರೆಯಬೇಕಷ್ಟೆ ಜಗತ್ತನ್ನು ವಾಸಯೋಗ್ಯವಾಗಿ ಕಟ್ಟುವ ಜವಾಬ್ದಾರಿ ನಮ್ಮ ಮೇಲಿದೆ.

ಪ್ರತಿ ಜೀವಿ ಸಹ ತನ್ನ ಪ್ರಗತಿ ಪಥದಲ್ಲಿ ನಿಶ್ಚಯವಾಗಿ ತಪ್ಪುಗಳು ಮಾಡಬೇಕಾದ್ದೇ ಹೊಸ ಪಾಠಗಳನ್ನು ಕಲಿತುಕೊಳ್ಳುವಾಗ ತಪ್ಪು ಹೆಜ್ಜೆ ಹಾಕುವುದು ತಪ್ಪಿದ್ದಲ್ಲ ಅಂತಹ ತಪ್ಪು ಹೆಜ್ಜೆಗಳು ಪಾಪಗಳು ಅಲ್ಲ ಅವು ತಪ್ಪುಗಳೂ ಅಲ್ಲ ಕ್ಷಮಿಸಲಾರದ ಅಪರಾಧಗಳೂ ಅಲ್ಲ. ತಪ್ಪದೇ ಹಾಕುವ ತಪ್ಪು ಹೆಜ್ಜೆಗಳನ್ನು ತಾವೇ ಕ್ಷಮಿಸಲಾರದ ಅಪರಾಧಗಳೆಂದು ಪರಿಗಣಿಸಿದರೆ ಹಾಗೂ ಇತರರು ತಪ್ಪದೇ ಹಾಕಬೇಕಾಗಿ ಬಂದ ತಪ್ಪು ಹೆಜ್ಜೆಗಳನ್ನು ಕ್ಷಮಿಸಲಾರದ ಅಪರಾಧಗಳೆಂದು ಭಾವಿಸಿದರೆ ಅವರಿಗೆ ಇತರರ ಸ್ಥಾನದಲ್ಲಿ ತಮ್ಮನ್ನು ಕಲ್ಪಿಸಿಕೊಂಡು ಅವರ ನೋವು-ನಲಿವು ಅರಿಯುವ ಪರಿಜ್ಞಾನ ಇಲ್ಲ ಎಂದರ್ಥ. ಆದ್ದರಿಂದ, ಕಲಿತುಕೊಳ್ಳುತ್ತಿರುವವರ ತಪ್ಪು ಹೆಜ್ಜೆಗಳನ್ನು ತಪ್ಪು ಹೆಜ್ಜೆಗಳು ಎಂದೇ ಸ್ವೀಕರಿಸಿ ಅವರ ತಪ್ಪು ಹೆಜ್ಜೆಗಳನ್ನು ತಪ್ಪುಗಳಾಗಿ ನೋಡದೆ ಅವು ಅವರವರ ವಿದ್ಯಾಭ್ಯಾಸಗಳಲ್ಲಿ ಕಲಿತುಕೊಳ್ಳಲಿಕ್ಕಾಗಿ ಮಾಡುವ ಚಿಕ್ಕಚಿಕ್ಕ ಲೋಪ ಗಳಿಂದ ಕೂಡಿದ ಪ್ರಯತ್ನಗಳೇ ಎಂದು ಅವುಗಳನ್ನು ಗುರುತಿಸುತ್ತಾ ಆ ರೀತಿಯಾಗಿ ಆ ಅರಿವಿನಲ್ಲಿರುವುದೇ ಪರಿಜ್ಞಾನ. ಅದರ ಹೊರತು, ಆ ಯಾವುದೇ ವಿದ್ಯೆಗಳು ಕಲಿತುಕೊಳ್ಳುತ್ತಿರುವಾಗ ಏನಾದರೂ ಅಪಸ್ವರವಾದರೆ ತಕ್ಷಣ ಅವರ ಮೇಲೆ ಬಿದ್ದು, ನೀನು ಅಪಸ್ವರ ನುಡಿದಿದ್ದೀಯ, ನೀನು ಕೆಲಸಕ್ಕೆ ಬಾರದವನು ಎಂದು ತಪಿತಸ್ಥನನ್ನಾಗಿ ನಿರ್ಣಯಿಸುವುದು ಪರಿಜ್ಞಾನ ಇಲ್ಲದವನ ಸ್ಥಿತಿ. ಒಂದು ವೇಳೆ ಅಪರಾಧ ಮಾಡಿದರೂ, ಅದನ್ನೇ ಸದಾ ನೆನೆಸಿಕೊಂಡಿರುವುದು ಎಂಬುವುದು ಜ್ಞಾನಿಯ ಸ್ಥಿತಿಯಲ್ಲ. ಮಾಡಿದ ಅಪರಾಧವನ್ನು ಆಗಿಂದಾಗ್ಗೆ ಮರೆಯಬೇಕು.\ ಪದೇ ಪದೆ ನೆನೆಸಿಕೊಳ್ಳುತ್ತಿದ್ದರೆ ಸಮಯ ವ್ಯರ್ಥ. ಆದ್ದರಿಂದ, ನಮ್ಮ ತಪ್ಪುಗಳನ್ನು, ನಮ್ಮ ಪಾಪಗಳನ್ನು ನೆನೆದು ಅಳುತ್ತಾ ನಿರಂತರ ಮತ್ತೆ ಮತ್ತೆ ಕೆದಕಿಕೊಳ್ಳುದಾಗಲೀ; ಇತರರ ತಪ್ಪುಗಳನ್ನು, ಇತರರ ಪಾಪಗಳನ್ನು ಸದಾ ನೆನೆಯುತ್ತಿರುವುದಾಗಲೀ, ಇದೆಲ್ಲಾ ಸ್ವಲ್ಪವೂ ಪರಿಜ್ಞಾನ ಅನಿಸಿಕೊಳ್ಳುವುದಿಲ್ಲ. ತಪ್ಪುಗಳನ್ನು ಮಾಡುವವರ ಹತ್ತಿರ ಅವರು ಯಾವ ರೀತಿ ತಪ್ಪುಗಳನ್ನು ಮಾಡಿದ್ದಾರೆಂದು ಪರೀಕ್ಷಿಸಿ ಆ ತಪ್ಪುಗಳನ್ನು ನಮ್ಮ ಜೀವನದಲ್ಲಿ ಮಾಡದೆ ಇರುವಂತೆ ಪಾಠ ಕಲಿತುಕೊಳ್ಳಲು ಸಾಧ್ಯವೇ ಎಂದು ಯೋಚಿಸುವುದು ಮತ್ತು ಆ ನಿಟ್ಟಿನಲ್ಲಿ ಮುಂದುವರಿಯುವುದೇ ಜ್ಞಾನಿಯ ಲಕ್ಷಣ. ಹಾಗೆಯೇ, ಒಳ್ಳೇ ಕೆಲಸ ಮಾಡುವವರನ್ನು ಪರೀಕ್ಷಿಸಿ, ಅವರು ಯಾವ ರೀತಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೋ ತಿಳಿದುಕೊಂಡು ಆ ರೀತಿಯಲ್ಲಿ ನಾವೂ ಒಳ್ಳೆಯವರಾಗಿರಬೇಕು ಎಂದು ನಿರ್ಣಯಿಸಬೇಕು ಅಂದರೆ, ಜ್ಞಾನಕ್ಕಾಗಿ ಹಂಬಲಿಸುವವನು ಎಲ್ಲರಿಂದ ಕಲಿತುಕೊಳ್ಳಬಲ್ಲ. ಪಾಪಗಳನ್ನು ಮಾಡಿದವ ರಿಂದ, ಪುಣ್ಯಗಳನ್ನು ಮಾಡಿದವರಿಂದ ಕಲಿತುಕೊಳ್ಳುತ್ತಲೇ ಇರಬಲ್ಲ. ಪಾಪ ಗಳನ್ನು ಮಾಡುವವರಿಂದ ಪಾಪಗಳು ಹೇಗೆ ಮಾಡಬಾರದೆಂದು ತಿಳಿದು ಕೊಳ್ಳುತ್ತಾನೆ. ಹಾಗೆಯೇ, ಪುಣ್ಯದ ಕೆಲಸಗಳನ್ನು ಮಾಡುವವರಿಂದ ಯಾವ ರೀತಿಯಲ್ಲಿ ಪುಣ್ಯ ಕಾರ್ಯಕ್ರಮಗಳನ್ನು ಕೈ ಹಿಡಿಯಬೇಕೆಂದು ತಿಳಿದು ಕೊಳ್ಳುತ್ತಾನೆ. ಈ ರೀತಿ, ಎಲ್ಲರ ಹತ್ತಿರದಿಂದ ಅದ್ಭುತವಾದ ಪಾಠಗಳನ್ನು ಅವಿಶ್ರಾಂತವಾಗಿ ಕಲಿತುಕೊಳ್ಳುತ್ತಾ ಇರುವವನೇ ಜ್ಞಾನಿಯಾಗುತ್ತಾನೆ. ಯಾರ ಹತ್ತಿರದಿಂದಲೂ ಏನೂ ಕಲಿತುಕೊಳ್ಳದೆ ಇರುವವನು ಕತ್ತಲೆಯ ಬದುಕು ಬದುಕುವವನು, ಸ್ವಲ್ಪವೂ ಪ್ರಕಾಶ ಇಲ್ಲದವನು, ಸ್ವಲ್ಪವೂ ಪರಿಜ್ಞಾನ ಇಲ್ಲದವನಾಗುತ್ತಾನೆ.

೨೦೧೪ ಮೇ ತಿಂಗಳ 19 ನೆ ತಾರೀಖು ನನ್ನ ಮದುವೆಯಾಗಿ ಇಂದಿಗೆ ಸರಿಯಾಗಿ ೮ ವರ್ಷಗಳು ತುಂಬಿದ ಸಂದರ್ಭದಲ್ಲಿ ನಮ್ಮ ವಿವಾಹ ವಾರ್ಷಿಕೋತ್ಸವವನ್ನು ಸಂತೋಷ, ಸಂಭ್ರಮ ಮತ್ತು ಪ್ರೀತಿಯೊಂದಿಗೆ ಸ್ವಾಗತಿಸಿದ್ದೇವೆ, ಆದರೆ ವಾರ್ಷಿಕೋತ್ಸವದ ಸಂದರ್ಬದಲ್ಲಿ ಮಾಡುವ ಸಂಕಲ್ಪಗಳ ಕತೆ ಏನು? ಇದು ಒಂದು ವರ್ಷದ ವಿಷಯವಲ್ಲ ಪ್ರತಿವರ್ಷವೂ ಇದ್ದದ್ದೇ ಹೊಸ ಬಾಳು ಹೊಸ ಜೀವನ ಹಾಗೇಹೀಗೆಂದು ನಾನಾ ಸಂಕಲ್ಪಗಳನ್ನು ಮಾಡುತ್ತೇವೆ ಮುರಿಯುತ್ತೇವೆ. ನನಗಂತೂ ಈ ಬಗ್ಗೆ ಅಷ್ಟಾಗಿ ಆಸಕ್ತಿಯಿಲ್ಲ ಆದರೆ ಈ ವರ್ಷ ನಾನೂ ಒಂದಷ್ಟು ಸಂಕಲ್ಪಗಳನ್ನು ಮಾಡಬೇಕೆಂದು ನನ್ನ ಪತ್ನಿ ಇಷ್ಟಪಟ್ಟಳು ಆ ಮೂಲಕ ನನ್ನಜೀವನ ಶೈಲಿ ಬದಲಿಸಬೇಕು ಎನ್ನುವುದು ಅವಳ ಇಚ್ಛೆಯಾಗಿತ್ತು ನನ್ನ ಅಭ್ಯುದಯ ಮತ್ತು ವಿಕಾಸಕ್ಕೆ ಪೂರಕವಾಗುವಂಥ ಕೆಲವು ಸಂಕಲ್ಪಗಳನ್ನು ಈ ಸಮಯದಲ್ಲಿ ನಾನು ಯೋಚಿಸಿದೆ ಅವುಗಳನ್ನು ಪಟ್ಟಿ ಸಹ ಮಾಡಿದೆ. ಏಕೆಂದರೆ, ಇವು ನನಗಷ್ಟೇ ಅಲ್ಲ ಪ್ರತಿಯೊಬ್ಬರಿಗೂ ಹೊಂದುವಂಥವು ಮತ್ತು ವ್ಯಕ್ತಿ ವಿಕಾಸಕ್ಕೆ ಪೂರಕವಾಗಿರುವಂಥವು ಎಂಬುದು ನನ್ನ ಅಭಿಪ್ರಾಯ. ಸಂಕಲ್ಪಗಳು ಎಂದಿಗೂ ಉತ್ತಮ ನಡತೆಗೆ ಪೂರಕವಾಗಿರಬೇಕು ಇವು ನಮ್ಮ ವ್ಯಕ್ತಿತ್ವ, ನಡವಳಿಕೆ, ಹವ್ಯಾಸಗಳ ಮೇಲೆ ಪೋಕಸ್ ಆಗಬೇಕು. ನನ್ನ ಸಂಕಲ್ಪಗಳು ಹೀಗಿವೆ;

ಮುಂದೂಡಿಕೆ ನಿಲ್ಲಿಸಿ
ಇದು ಸಹಜವಾಗಿ ಎಲ್ಲರಲ್ಲೂ ಕಾಣುವಂಥದ್ದು, ಇದಕ್ಕೆ ನಾನೂ ಹೊರತಲ್ಲ ಈ ತನಕ ನನ್ನ ಸಂಕಲ್ಪಗಳನ್ನು ಮುಂದೂಡುತ್ತಲೇ ಬಂದಿದ್ದೇನೆ ಹೀಗೆ ಮಾಡುವುದರಿಂದ ಮಾಡುವ ಕೆಲಸಕ್ಕೆ ನ್ಯಾಯ ಕೊಡಲು ಸಾಧ್ಯವಾಗದು ಹೀಗಾಗಿ ಮುಂದೂಡುವ ಸ್ವಭಾವವನ್ನು ಬದಲಿಸಿಕೊಳ್ಳಬೇಕು.
ದೇಹದ ಮಾತು ಆಲಿಸಿ
ದೇಹವು ನಮ್ಮೊಂದಿಗೆ ಮಾತನಾಡುತ್ತದೆ ಅದಕ್ಕೆ ತೊಂದರೆಯಾದಾಗ ಸೂಚನೆಗಳನ್ನೂ ನೀಡುತ್ತದೆ ಅದರ ಮಾತಿಗೆ ನಾವು ಸ್ಪಂದಿಸಬೇಕು ಆರೋಗ್ಯವೇ ಭಾಗ್ಯವಾಗಿದ್ದು ನಮಗೆ ಚೈತನ್ಯಶೀಲ ದೇಹದ ಅಗತ್ಯವಿದೆ. ದೈಹಿಕ, ಮಾನಸಿಕ ಮತ್ತು ಅಧ್ಯಾತ್ಮಿಕವಾಗಿ ದೃಢತೆ ಸಾಧಿಸಲು ಆರೋಗ್ಯವಂತ ದೇಹ ಅತ್ಯಗತ್ಯ. ಹಿರಿಯರಿಗೆ ಗೌರವ: ನಮಗೊಂದು ಅಸ್ತಿತ್ವ ನೀಡಿದ ಹಿರಿಯರ ಬಗ್ಗೆ ಗೌರವ ಭಾವನೆ ಬೆಳೆಸಿಕೊಳ್ಳಬೇಕು ಆ ಭಾವವನ್ನು ಪ್ರದರ್ಶಿಸಿ ಹಿರಿಯ ಜೀವಿಗಳ ಮನಸ್ಸಿಗೆ ಮುದ ನೀಡಬೇಕು ನಾನಂತೂ ಈ ಕಾರ್ಯಕ್ಕೆ ಇಂದಿನಿಂದಲೇ ಚಾಲನೆ ನೀಡಬೇಕು ಎಂದು ನಿರ್ಧರಿಸಿದ್ದೇನೆ.
ಧನ್ಯವಾದ ಹೇಳಿ
ಉಪಕಾರ ಸ್ಮರಣೆ ಎನ್ನುವುದು ಸದ್ಗುಣಗಳಲ್ಲಿ ಒಂದು ನೀವು ಯಾರಿಂದ ಏನೇ ಪಡೆದರೂ ಧನ್ಯವಾದ ಹೇಳುವುದನ್ನು ಮರೆಯದಿರಿ ಹೀಗೆ ಮಾಡುವುದರಿಂದ ಸಕಾರಾತ್ಮಕ ಮನಸ್ಥಿತಿ ನಮ್ಮದಾಗಿ ಇತರರಿಗೂ ನಮ್ಮ ಬಗ್ಗೆ ಗೌರವ ಮೂಡುತ್ತದೆ ಎಲ್ಲರನ್ನೂ ಆಕರ್ಷಿಸುವ ಶಕ್ತಿ ಈ ಸದ್ಗುಣಕ್ಕಿದೆ ಇದರಿಂದ ಶಾಂತಿ, ಸಂತೋಷ, ಬಾಂಧವ್ಯಗಳು ವೃದ್ಧಿಸುತ್ತವೆ.
ಪ್ಲೀಸ್ ಮತ್ತು ಥ್ಯಾಂಕ್ ಯೂ
ಕಳೆದ ತಿಂಗಳು ನಾನು ನನ್ನ ಕುಟುಂಬ ಸಮೇತ ತಿರುಪತಿಗೆ ಪ್ರಯಾಣಿಸುತ್ತಿದ್ದೆ ಮಾರ್ಗ ಮಧ್ಯೆ ಕಾಪಿಗೆಂದು ಗಾಡಿ ನಿಲ್ಲಿಸಿದಾಗ ಮಕ್ಕಳು ಬಿಸ್ಕತ್ ಕೇಳಿದರು ನನ್ನ ಪತ್ನಿ ಕಾಪಿ ತೆಗೆದುಕೊಂಡು ಬರಲು ಹೇಳಿ ಎಲ್ಲರೂ ವಾಹನದ ಬಳಿಯೇ ಕುಳಿತಿದ್ದರು ನಾನು ಅಂಗಡಿ ಮುಂದೆ ನಿಂತು, ''ಎರಡು ಬಿಸ್ಕತ್ ಪಾಕೆಟ್ ಮತ್ತು ೪ ಕಪ್ ಕಾಫಿ'' ಎಂದೆ. ನನ್ನ ಕೋರಿಕೆ ಸ್ವಲ್ಪ ಒರಟಾಗಿತ್ತು. ಕೌಂಟರ್‌ನಲ್ಲಿ ಕೂತಿದ್ದವನು ಅಸಹನೆಯಿಂದ ನೋಡುತ್ತಾ, ''ಮಾಂತ್ರಿಕ ಪದವನ್ನು ಬಳಸಿ,'' ಎಂದ. ನನಗೆ ಒಗಟಿನಂತೆ ಎಲ್ಲವೂ ಕಾಣಿಸಿತು. ನನ್ನ ಗೊಂದಲಮಯ ಮುಖಭಾವ ನೋಡಿದ ಆತ, ''ಪ್ಲೀಸ್ ಅನ್ನುವುದೇ ಮಾಂತ್ರಿಕ ಪದ,'' ಎಂದುತ್ತರಿಸಿ ನಕ್ಕ. ಹೌದು, ಈ ಪದಗಳು ನಮ್ಮ ಮನೋಭಾವವನ್ನು ಬಿಂಬಿಸುತ್ತವೆ.
ಅಂದಹಾಗೇ, ಇವು ವಾರ್ಷಿಕೋತ್ಸವದ ಸಂಕಲ್ಪಗಳು ಮಾತ್ರವಲ್ಲ. ಉನ್ನತ ವ್ಯಕ್ತಿತ್ವ ಹೊಂದುವುದಕ್ಕೆ ಇವು ಬುನಾದಿ ಎಂಬುದು ನನ್ನ ಭಾವನೆ.